ಭದ್ರಾವತಿ: ‘ಭಕ್ತರ ಸಾಮೀಪ್ಯಕ್ಕೆ ದೇವರು ಪ್ರತಿಷ್ಠಾಪಿತನಾದರೆ ಶಕ್ತಿಯ ಸಂಕಲ್ಪ ಮತ್ತಷ್ಟು ಹೆಚ್ಚಲಿದೆ’ ಎಂದು ಮಂತ್ರಾಲಯದ ಸುಬುಧೇಂದ್ರತೀರ್ಥ ಶ್ರೀಪಾದರು ಹೇಳಿದರು.
ಸಂಕರ್ಷಣ ಧರ್ಮಸಂಸ್ಥೆ ಟ್ರಸ್ಟ್ ನೇತೃತ್ವದಲ್ಲಿ ಸಿದ್ಧಾರೂಢನಗರದಲ್ಲಿ ಶುಕ್ರವಾರ ಪ್ರತಿಷ್ಠಾಪಿತವಾದ ಶ್ರೀನಿವಾಸ ದೇವರ ವಿಗ್ರಹಕ್ಕೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ದೇವಾಲಯ ಸಂಸ್ಕೃತಿ, ಆಚಾರ, ವಿಚಾರಗಳಿಗೆ ವಿಶೇಷ ಮಹತ್ವ, ಮನ್ನಣೆ ಇರುತ್ತದೆ. ಇದನ್ನು ನಿರ್ವಿಘ್ನವಾಗಿ ನೆರವೇರಿಸುವ ಕೆಲಸವನ್ನು ಭಕ್ತರು ಮಾಡುವ ಮೂಲಕ ಈ ಕೇಂದ್ರದ ಮಹತ್ವವನ್ನು ಸಾರಬೇಕು.ಭಕ್ತ ಮತ್ತು ಭಗವಂತನ ನಡುವೆ ಸಂಬಂಧ ಹೆಚ್ಚುವ ರೀತಿಯಲ್ಲಿ ಶ್ರೀನಿವಾಸನ ಭಕ್ತರಾದ ರಾಘವೇಂದ್ರ ಸ್ವಾಮಿಗಳ ಮಠ ಇಲ್ಲಿ ಈಗಾಗಲೇ ನೆಲೆ ನಿಂತಿದೆ. ಸಹಜವಾಗಿ ಇಂದು ಶ್ರೀನಿವಾಸ ಇಲ್ಲಿ ನೆಲೆ ನಿಲ್ಲುವಂತ ಸಂದರ್ಭ ಸೃಷ್ಟಿಯಾಗಿದೆ ಎಂದರು.
ಟ್ರಸ್ಟ್ ಅಧ್ಯಕ್ಷರಾದ ವಾಸುದೇವಮೂರ್ತಿ, ರಾಘವೇಂದ್ರ ಮಧುಸೂದನ, ಶ್ರೀನಿವಾಸಾಚಾರ್, ರಾಮಚಂದ್ರಾಚಾರ್, ಗೋಪಾಲಕೃಷ್ಣಾಚಾರ್,ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪೌರಾಯುಕ್ತ ಪರಮೇಶ್ವರ ಇದ್ದರು.
ಇದಕ್ಕೂ ಮುನ್ನ ಸ್ವಾಮೀಜಿಗಳ ಪಾದಪೂಜೆ ನಡೆಯಿತು. ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು. ವಿವಿಧ ಗಣ್ಯರು ಭಾಗವಹಿಸಿದ್ದರು.