ಸಚಿವ ಕೆ.ಎಸ್.ಈಶ್ವರಪ್ಪ ಅವರೂ ಅಕ್ರಮದ ಹಿಂದೆ ಮುಸ್ಲಿಂ ಸಂಘಟನೆ ಕೈವಾಡವಿದೆ ಎಂದು ಹೇಳಿದ್ದಾರೆ. ಕೆಲವರಿಗೆ ಕೆಟ್ಟ ಮೇಲೆ ಬುದ್ಧಿ ಬರುತ್ತದೆ. ಆದರೆ, ಈಶ್ವರಪ್ಪನಂತಹವರಿಗೆ ಕೆಟ್ಟ ಮೇಲೆಲೂ ಬುದ್ಧಿ ಬಂದಿಲ್ಲ. ಬಂಧಿತರಾದ ನೇತ್ರಾವತಿ, ರೋಹಿತ್ ಕುಮಾರ್, ಶಶಿ ಅವರ ಹೆಸರನ್ನು ತೇಜಸ್ವಿ ಸೂರ್ಯ ಏಕೆ ಹೇಳಲಿಲ್ಲ? 205 ಜನರಲ್ಲಿ ಕೇವಲ 17 ಜನ ಮುಸ್ಲಿಮರ ಹೆಸರು ಅವರ ಕಣ್ಣಿಗೆ ಬಿತ್ತೆ? ಅಷ್ಟಕ್ಕೂ ತೇಜಸ್ವಿ ಸೂರ್ಯ ಯಾರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂಬುವುದು ಅವರಿಗೇ ಗೊತ್ತಿಲ್ಲ. ಈ ಏಜೆನ್ಸಿಗೆ ಜವಾಬ್ದಾರಿ ವಹಿಸಿದ್ದು ಬಿಜೆಪಿ ಸರ್ಕಾರ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅದರ ಮುಖ್ಯಸ್ಥರು. ಹೀಗಿದ್ದು ಮುಖ್ಯಮಂತ್ರಿಗಳ ವಿರುದ್ಧವೇ ಆರೋಪ ಮಾಡಿದ ಹಾಗಾಗುತ್ತದೆ ಎಂಬ ಕನಿಷ್ಠ ಪ್ರಜ್ಞೆಯೂ ಅವರಿಗಿಲ್ಲ ಎಂದು ಟೀಕಿಸಿದ್ದಾರೆ.
ಸರ್ಕಾರ ಕೋವಿಡ್ ನಿಯಂತ್ರಿಸುವತ್ತ ಗಮನಹರಿಸಬೇಕು. ಆಮ್ಲಜನಕ ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಪಕ್ಷ, ಜಾತಿ, ಧರ್ಮ ಮೀರಿ ಮಾನವೀಯತೆ ಬೆಳೆಸಿಕೊಳ್ಳಬೇಕು. ಎಲ್ಲರೂ ಒಟ್ಟಾಗಿ ಕೊರೊನಾ ವಿರುದ್ಧ ಹೋರಾಟ ಮಾಡಬೇಕು ಎಂದು ಮನವಿ ಮಾಡಿದ್ದಾರೆ.