ಹೊಳೆಹೊನ್ನೂರು: ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಕೊಡುಗೆ ಅಪಾರವಾಗಿದೆ. ಸಾರ್ಜನಿಕರು ಹಾಗೂ ಕಾರ್ಯಕರ್ತರು ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಪಟ್ಟಣದಲ್ಲಿ ಸುಮಾರು ₹ 4.82 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಚಿತ್ರದುರ್ಗದಿಂದ ಶಿವಮೊಗ್ಗವರೆಗೆ ಅಪೂರ್ಣಗೊಂಡ ರಸ್ತೆ ನಿರ್ಮಾಣ ಮತ್ತು ಚಿತ್ರದುರ್ಗ, ಚನ್ನಗಿರಿ, ಹೊಳೆಹೊನ್ನೂರು ಹಾಗೂ ಶಿವಮೊಗ್ಗ ನಗರಗಳ 4 ಪಥದ ಬೈಪಾಸ್ ರಸ್ತೆ ಹಾಗೂ ಚಿತ್ರದುರ್ಗ, ಹೊಳಲ್ಕೆರೆ, ಶಿವಮೊಗ್ಗದಲ್ಲಿ 3 ರೈಲ್ವೆ ಮೇಲ್ಸೇತುವೆ, ಭದ್ರಾ ನದಿಗೆ 4 ಪಥದ ಭಾರಿ ಸೇತುವೆ, 10 ಕಿರುಸೇತುವೆ, ವೆಹಿಕಲ್ ಅಂಡರ್ ಪಾಸ್ಗಳು ಮತ್ತು 42 ಕಲ್ವರ್ಟ, ಕಾಂಕ್ರೀಟ್ ಚರಂಡಿ, ಟ್ರಕ್ ಹಾಗೂ ಬಸ್ ನಿಲ್ದಾಣಗಳ ನಿರ್ಮಾಣಕ್ಕಾಗಿ ₹ 350 ಕೋಟಿ ಮೌಲ್ಯದ ಕಾಮಗಾರಿ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.
‘ಪಟ್ಟಣದಿಂದ ಹೊರಹೋಗುವ ರಸ್ತೆಗೆ ವಿದ್ಯುತ್ ದೀಪ, ಬಾಕ್ಸ್ ಚರಂಡಿ ಕಾಮಗಾರಿಗೆ ಮಾಜಿ ಶಾಸಕ ಕೆ.ಬಿ.ಅಶೋಕನಾಯ್ಕ ಅವರು ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ₹ 5 ಕೋಟಿ ಹಾಗೂ ಭದ್ರಾವತಿ ರಸ್ತೆಯ ಕಾಮಾಗಾರಿಗೆ ₹ 5 ಕೋಟಿ ಅನುದಾನ ತರುವಲ್ಲಿ ಸಫಲರಾಗಿದ್ದರು’ ಎಂದರು.
‘ಸಂಸದರ ಅನುದಾನದಿಂದ ಕ್ಷೇತ್ರವು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಅವರೊಂದಿಗೆ ಕೈ ಜೋಡಿಸಿ ಕೇತ್ರಕ್ಕೆ ಹೆಚ್ಚಿನ ಅನುದಾನ ತರಲಾಗುವುದು. ಕ್ಷೇತ್ರವನ್ನು ಮಾದರಿಯಾಗಿ ರೂಪಿಸಲಾಗುವುದು’ ಎಂದು ಶಾಸಕಿ ಶಾರದ ಪೂರ್ಯನಾಯ್ಕ ಹೇಳಿದರು.
ಬಸ್ಗಳನ್ನು ಹೆಚ್ಚಿಸುವಂತೆ ಹಾಗೂ ವಿದ್ಯಾರ್ಥಿಗಳು ಸಂಚರಿಸಲು ಬಸ್ ಸೌಲಭ್ಯ ಒದಗಿಸಬೇಕು ಎಂದು ಪದವಿ ಕಾಲೇಜು ಪ್ರಾಂಶುಪಾಲರು, ಶಿಕ್ಷಕರು ಹಾಗೂ ಎಬಿವಿಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಮಾಜಿ ಶಾಸಕ ಕೆ.ಬಿ.ಅಶೋಕನಾಯ್ಕ, ಕಲ್ಲಜ್ಜನಾಳ್ ಮಂಜುನಾಥ, ಸುಬ್ರಮಣಿ, ಕಿರಣ್ ಕುಮಾರ್, ರವಿಕುಮಾರ್, ಮಹಾದೇವಪ್ಪ, ವೆಂಕಟೇಶ್, ನಾರಾಯಣ, ನಿರ್ಮಲಾ, ಬಿಂದು, ಎ.ಕೆ.ರಮೇಶ್, ಪರಶುರಾಮ್, ಶ್ರಿನಿವಾಸ್, ಮಲ್ಲೇಶಪ್ಪ, ಉಜ್ಜನಪ್ಪ ಇದ್ದರು.