ಶಿವಮೊಗ್ಗ: ಅಂಬಿಗರ ಚೌಡಯ್ಯಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಕಾರಾತ್ಮಕ ಬದುಕು ಸಾಗಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಹೇಳಿದರು.
ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
‘ಅಂಬಿಗರ ಚೌಡಯ್ಯ ಶರಣರಲ್ಲಿಯೇ ಅತಿ ಹೆಚ್ಚು ಪ್ರತಿಭಾವಂತ. ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಎಲ್ಲ ವಚನಗಳಲ್ಲಿ ನಿರ್ದಾಕ್ಷಿಣ್ಯ ಮನೋಭಾವ ಮತ್ತು ಸಾಮಾಜಿಕ ಕಳಕಳಿ ಇದೆ. ಹೀಗಾಗಿ ಅಂತಹ ಶರಣರ ಚಿಂತನೆಗಳನ್ನು ಯುವ ಜನಾಂಗದವರು ತಮ್ಮ ಬದುಕಿನಲ್ಲಿ ರೂಢಿಸಿಕೊಂಡರೆ ನಮ್ಮ ಸಮಾಜ ಜಾತ್ಯತೀತ ಹಾಗೂ ಮಾನವೀಯ ಮೌಲ್ಯಗಳಿರುವ ಆದರ್ಶ ಸಮಾಜವಾಗಲು ಸಾಧ್ಯವಿದೆ’ ಎಂದರು.
ಬಸವಣ್ಣ ಮತ್ತು ಅಂಬಿಗರ ಚೌಡಯ್ಯ ಅವರ ವಿಚಾರಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಕೋವಿಡ್ ಕಾರಣದಿಂದಾಗಿ ಅಂಬಿಗರ ಚೌಡಯ್ಯ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ ಎಂದು ತಿಳಿಸಿದರು.
ಮೇಯರ್ ಸುನಿತಾ ಅಣ್ಣಪ್ಪ ಮಾತನಾಡಿ, ‘ಅಂಬಿಗರ ಚೌಡಯ್ಯ ಜಯಂತಿ ಮತ್ತು ಬಸವಣ್ಣ ಅವರ ಜಯಂತಿ ಒಂದು ಸಮಾಜಕ್ಕೆ ಸೀಮಿತವಾದುದ್ದಲ್ಲ. ಅವರು ಸಮಾಜವನ್ನು ಮೀರಿ ಬದುಕಿದವರು. ಅವರ ಆದರ್ಶ ಮತ್ತು ತತ್ವಗಳ ಮಾರ್ಗದರ್ಶನದಲ್ಲಿ ನಡೆಯಬೇಕು’ ಎಂದು ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಪಾಲಿಕೆ ಸದಸ್ಯ ಎಸ್.ಎನ್. ಚನ್ನಬಸಪ್ಪ ಇದ್ದರು.