ಶಿವಮೊಗ್ಗ: ಸಂಪುಟದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎನ್ನುವ ನಿರ್ಧಾರ ಕೇಂದ್ರ ನಾಯಕರು, ಮುಖ್ಯಮಂತ್ರಿ ತೆಗೆದುಕೊಳ್ಳುತ್ತಾರೆ. ಯೋಗ ಇದ್ದವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದ ಹಲವೆಡೆ ಗುರುವಾರ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಮನೆಯಲ್ಲಿ ಮದುವೆಯಾಗುವ ಹೆಣ್ಣಿದ್ದರೆ ಗಂಡು ಮಕ್ಕಳು ನೋಡಲು ಬರುತ್ತಾರೆ. ಯಾರಿಗೆ ಹೆಣ್ಣಿನ ಯೋಗ ಇರುತ್ತೋ ಅವರಿಗೆ ಮದುವೆ ಆಗುತ್ತೆ. ಹಾಗೆಯೇ, ಸಂಪುಟದಲ್ಲಿ ಸಚಿವ ಸ್ಥಾನ ಖಾಲಿ ಇದ್ದಾಗ ಶಾಸಕರಿಗೆ ಮಂತ್ರಿ ಆಗುವ ಅಪೇಕ್ಷೆ ಇರುತ್ತದೆ. ಯಾರಿಗೆ ಯೋಗ ಇರುತ್ತದೋ ಅವರು ಮಂತ್ರಿಯಾಗುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ಜಾತಿವಾರು, ಜಿಲ್ಲಾವಾರು ಪ್ರಾತಿನಿಧ್ಯ ಸದ್ಯದ ಸ್ಥಿತಿಯಲ್ಲಿ ಕಷ್ಟ. ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಎಲ್ಲರಿಗೂ ಆಶ್ವಾಸನೆ ಕೊಡಲಾಗಿತ್ತು. ಹಿಂದೆ ಚುನಾವಣೆಯಲ್ಲಿ ಗೆದ್ದವರಿಗೆ ನೀಡಿದ ಆಶ್ವಾಸನೆಯಂತೆ ಸಚಿವ ಸ್ಥಾನ ನೀಡಲಾಗಿತ್ತು. ಸಂಪುಟ ವಿಸ್ತರಣೆ ವೇಳೆ ಪಕ್ಷದ ನಿಷ್ಠರು, ಪಕ್ಷಕ್ಕೆ ಬಂದವರಿಗೂ ಅವಕಾಶ ಕಲ್ಪಿಸಬೇಕಿದೆ ಎಂದರು.
ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿಲ್ಲ. ಅದು ಮರಾಠ ಸಮುದಾಯ ಅಭಿವೃದ್ಧಿ ನಿಗಮ. ಮರಾಠಿ ಭಾಷೆಗೂ, ನಿಗಮಕ್ಕೂ ಸಂಬಂಧವಿಲ್ಲ. ರಾಜ್ಯದಲ್ಲಿ ನೂರಾರು ವರ್ಷಗಳಿಂದ ಕನ್ನಡಿಗರಾಗಿ ಬದುಕುತ್ತಿರುವ ಮರಾಠ ಜನರ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ವಿವರ ನೀಡಿದರು.
ಸ್ಥಳೀಯ ಲೋಕೋಪಯೋಗಿ ವಸತಿ ಗೃಹಗಳು ತುಂಬಾ ಹಳೆಯದಾಗಿವೆ. ಮಳೆಗಾಲದಲ್ಲಿ ಸೋರುತ್ತಿವೆ ಎಂದು ನಿವಾಸಿಗಳು ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚಿಸಿ, ದುರಸ್ತಿ ಮಾಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ಸದಸ್ಯೆ ಸುನಿತಾ ಅಣ್ಣಪ್ಪ, ಮುಖಂಡರಾದ ಕೆ.ವಿ. ಅಣ್ಣಪ್ಪ, ಜಗದೀಶ್, ನಾಗರಾಜ್ ಉಪಸ್ಥಿತರಿದ್ದರು.