ಕಾರ್ಗಲ್:ಶರಾವತಿ ಕೊಳ್ಳದಲ್ಲಿ ಸುರಿಯುತ್ತಿರುವ ಮಳೆಯಿಂದ ಜೋಗ ಜಲಪಾತ ಧುಮ್ಮಿಕ್ಕುತ್ತಿದ್ದು, ಜಲಪಾತದ ಸೌಂದರ್ಯ ಸವಿಯಲು ಶನಿವಾರ ಪ್ರವಾಸಿಗರ ದಂಡು ಲಗ್ಗೆಯಿಟ್ಟಿತ್ತು.
ಕೊರೊನಾ ಕಾರಣ ಜಲಪಾತಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದ್ದು, ಪ್ರವಾಸಿಗರು ಜಲಪಾತ ವೀಕ್ಷಣೆಗೆ ಬರುತ್ತಿದ್ದಾರೆ.
ಸ್ವಾತಂತ್ರ್ಯೋತ್ಸವ ರಜೆ ಹಾಗೂ ಶನಿವಾರವಾದ ಕಾರಣ ಅತಿ ಹೆಚ್ಚು ಪ್ರವಾಸಿಗರು ಬಂದಿದ್ದರು. ಇದರಿಂದ ಪ್ರಾಧಿಕಾರದ ಪ್ರಧಾನ ದ್ವಾರದಲ್ಲಿ ಸ್ಯಾನಿಟೈಸರ್ ನೀಡಲು ಮತ್ತು ಥರ್ಮಲ್ ಸ್ಕ್ಯಾನಿಂಗ್ ಸಾಧ್ಯವಾಗದೇ ಪ್ರವಾಸಿಗರನ್ನು ವಾಹನ ಸಮೇತ ಒಳಗೆ ಬಿಡಲಾಯಿತು.
ಜೋಗದ ಗುಂಡಿ ಮಾರ್ಗಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಿರುವುದಕ್ಕೆ ಹಲವು ಯುವಕ ಯುವತಿಯರು ಬೇಸರ ವ್ಯಕ್ತಪಡಿಸುತ್ತಿದ್ದುದು ಕಂಡುಬಂತು.
ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಿಂದ ಅತಿ ಹೆಚ್ಚು ಪ್ರವಾಸಿಗರು ಜಲಪಾತ ವೀಕ್ಷಣೆಗೆ ಬಂದಿದ್ದರು ಪ್ರಾಧಿಕಾರದ ಸಿಬ್ಬಂದಿ ತಿಳಿಸಿದರು.