ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ಕಾಣದ ಪರಿಸರ-ಅಭಿವೃದ್ಧಿ ಸಂಘರ್ಷ

ಹೇಳಿಕೆ ಮಟ್ಟದಲ್ಲೇ ಉಳಿದ ಮಲೆನಾಡಿನ ಸುಸ್ಥಿರ ಅಭಿವೃದ್ಧಿಯ ಕಲ್ಪನೆ
Last Updated 21 ಮಾರ್ಚ್ 2022, 5:17 IST
ಅಕ್ಷರ ಗಾತ್ರ

ಸಾಗರ: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಹೆಸರಿನಲ್ಲಿ ಮರಗಳ ಮಾರಣಹೋಮ, ಪರಿಸರ ಸಂರಕ್ಷಣೆ ಕಡೆಗಣಿಸಿ ಪ್ರವಾಸೋದ್ಯಮ ಅಭಿವೃದ್ಧಿ, ಕೋಟ್ಯಂತರ ರೂಪಾಯಿ ವೆಚ್ಚದ ನೂತನ ಯೋಜನೆಗಳ ಅನುಷ್ಠಾನ, ಏಕ ಜಾತಿ ನೆಡುತೋಪುಗಳ ನಿರ್ಮಾಣ, ಬಗರ್‌ಹುಕುಂ ಹೆಸರಲ್ಲಿ ಕಂದಾಯ ಅರಣ್ಯಗಳ ನಾಶ, ಕೆರೆಗಳ ಒತ್ತುವರಿ, ಜಲಮೂಲಗಳ ಸಂರಕ್ಷಣೆಯಲ್ಲಿ ದಿವ್ಯ ನಿರ್ಲಕ್ಷ್ಯ...

–ಇವು ಅಭಿವೃದ್ಧಿಯ ಹೆಸರಲ್ಲಿ ಮಲೆನಾಡಿನ ಪರಿಸರ ನಾಶದ ಒಂದಷ್ಟು ಉದಾಹರಣೆಗಳು.

ಜನಸಂಖ್ಯೆ ಬೆಳೆದಂತೆ ಹಾಗೂ ಆಯಾ ಕಾಲಮಾನಕ್ಕೆ ತಕ್ಕಂತೆ ಸರ್ಕಾರ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಜನರ ಹಿತಕ್ಕಾಗಿ ರೂಪಿಸುವುದು ಅನಿವಾರ್ಯ. ಆದರೆ, ಪರಿಸರ ಕಡೆಗಣಿಸಿ ನಡೆಸುವ ಅಭಿವೃದ್ಧಿ ಎಷ್ಟರ ಮಟ್ಟಿಗೆ ಸೂಕ್ತ ಎಂಬ ಪ್ರಶ್ನೆಯೂ ಮುನ್ನೆಲೆಯಲ್ಲಿದೆ. ಪರಿಸರದ ಹೆಸರಿನಲ್ಲಿ ಯೋಜನೆಗಳನ್ನು ವಿರೋಧಿಸುವುದು ಸರಿಯಲ್ಲ ಎಂಬ ಮತ್ತೊಂದು ವಾದವೂ ಧ್ವನಿ ಪಡೆದಿದೆ. ಹಾಗಾಗಿ, ಪರಿಸರ-ಅಭಿವೃದ್ಧಿ ನಡುವಿನ ಸಂಘರ್ಷ ಮಲೆನಾಡಿನಲ್ಲಿ ಮುಂದುವರಿಯುತ್ತಲೇ ಇದೆ.
ಮಧ್ಯ ಪಶ್ಚಿಮಘಟ್ಟದಲ್ಲಿ ಬರುವ ಸಾಗರ ಹಾಗೂ ಸುತ್ತಮುತ್ತಲಿನ ಪ್ರದೇಶದ ನಿತ್ಯಹರಿದ್ವರ್ಣ ಕಾಡು, ಸೊಪ್ಪಿನ ಬೆಟ್ಟ, ಕಾನುಗಳನ್ನು ನಾಶ ಮಾಡಿ 1980ರ ದಶಕದಲ್ಲಿ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶವನ್ನು ಏಕ ಜಾತಿ ಅಕೇಶಿಯಾ ನೆಡುತೋಪಾಗಿ ಪರಿವರ್ತಿಸಲಾಗಿದೆ.

ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ನೆಡುತೋಪು ನಿರ್ಮಾಣವಾದ ಕಾರಣ ಜೀವವೈವಿಧ್ಯ ನಶಿಸಿಹೋಗಿವೆ. ಕಾಡುಪ್ರಾಣಿಗಳಿಗೆ ನೈಸರ್ಗಿಕವಾದ ಆಹಾರದ ಕೊರತೆಯಾಗಿ ಪ್ರಾಣಿಗಳು ನಾಡಿಗೆ ಪ್ರವೇಶಿಸುತ್ತಿವೆ. ಇದು ಮಾನವ-ವನ್ಯಜೀವಿ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಕೇರಳದ ಶುಂಠಿ ಕೃಷಿ ಶಿವಮೊಗ್ಗ ಜಿಲ್ಲೆಗೂ ಹಬ್ಬಿದೆ. ಶುಂಠಿಗಾಗಿ ಸಾಕಷ್ಟು ಕಾಡು ನಾಶ ಮಾಡಲಾಗಿದೆ. ಅಪಾರ ಪ್ರಮಾಣದ ರಾಸಾಯನಿಕ ಬಳಸಲಾಗುತ್ತಿದೆ. ಒಂದು ಬಾರಿ ಶುಂಠಿ ಉಳುಮೆ ಮಾಡಿದ ಭೂಮಿಯಲ್ಲಿ ಮತ್ತೆ ಮರುವರ್ಷ ಬೆಳೆ ತೆಗೆಯಲಾಗದು. ಶುಂಠಿ ಕೃಷಿ ಕಾರಣಕ್ಕೆ ನಾಶವಾಗಿರುವ ಒತ್ತುವರಿಯಾಗಿರುವ ಅರಣ್ಯದ ಪ್ರಮಾಣವೂ ವ್ಯಾಪಕವಾಗಿದೆ. ಇದು ಪರಿಸರದ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಭೂಮಿಯ ಒಡೆತನ ಇಲ್ಲದ ರೈತರಿಗೆ ಭೂಮಿಯ ಹಕ್ಕು ದೊರಕಿಸಿಕೊಡಲು ಜಾರಿಗೆ ಬಂದ ಬಗರ್‌ಹುಕುಂ ಕಾಯ್ದೆ ಕಾರಣ ಸಾಕಷ್ಟು ಭೂಮಿ ಬಳಕೆಯಾಗಿದೆ. ಈ ಕಾಯ್ದೆಯಡಿ ಅರ್ಹ ಫಲಾನುಭವಿಗಳಿಗೆ ಭೂಮಿ ದೊರಕುವ ಬಗ್ಗೆ ಯಾರದ್ದೂ ತಕರಾರು ಇಲ್ಲ. ಆದರೆ, ಉಳ್ಳವರು ಕಾಯ್ದೆಯ ದುರುಪಯೋಗ ಮಾಡಿಕೊಂಡು ನೂರಾರು ಎಕರೆ ಭೂಮಿ ಒತ್ತುವರಿ ಮಾಡಿದ್ದರೂ ಕ್ರಮ ಜರುಗಿಸಿಲ್ಲ.
ಶರಾವತಿ ಜಲ ವಿದ್ಯುತ್ ಯೋಜನೆ ಸೇರಿ ಹಲವು ಯೋಜನೆಗಳಿಗಾಗಿ ಭೂಮಿಯನ್ನು ಕಳೆದುಕೊಂಡ ನಿರಾಶ್ರಿತರಿಗೆ ಇನ್ನೂ ಭೂಮಿಯ ಹಕ್ಕು ದೊರಕಿಲ್ಲ. ವಿವಿಧ ಯೋಜನೆಗಳಿಗಾಗಿ ಭೂಸ್ವಾಧೀನ ಪ್ರಕ್ರಿಯೆ ಮೂಲಕ ಭೂಮಿ ಕಳೆದುಕೊಂಡವರಿಗೆ ಪರಿಹಾರದ ಹಣವೂ ಪೂರ್ಣ ಪ್ರಮಾಣದಲ್ಲಿ ಕೈಸೇರಿಲ್ಲ.

ಅರಣ್ಯಭೂಮಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿರುವ ಸಾವಿರಾರು ಮಂದಿಗೆ ಹಕ್ಕು ದೊರೆತಿಲ್ಲ. ಕಾಯ್ದೆಯ ಕೆಲವು ನಿಯಮಗಳಿಂದಾಗಿ ಭೂ ಹಕ್ಕು ಪಡೆಯಲು ಸಾಧ್ಯವಾಗಿಲ್ಲ. ಒಂದೆಡೆ ಅರಣ್ಯಭೂಮಿಯನ್ನು ಸ್ವಾರ್ಥಕ್ಕಾಗಿ ಒತ್ತುವರಿ ಮಾಡಿರುವವರೂ ಅರ್ಜಿ ಸಲ್ಲಿಸಿದ್ದಾರೆ. ಲಾಗಾಯ್ತಿನಿಂದ ಭೂಮಿಯ ಸಾಗುವಳಿ ಮಾಡಿ, ಮನೆ ಕಟ್ಟಿಕೊಂಡು ವಾಸವಾಗಿದ್ದರೂ ಸರ್ಕಾರ ದಿಢೀರನೆ ಆ ಪ್ರದೇಶವನ್ನು ಅರಣ್ಯಭೂಮಿ ಎಂದು ಘೋಷಿಸಿರುವುದು ಅಲ್ಲಿನ ವಾಸಿಗಳ ಆತಂಕಕ್ಕೆ ಕಾರಣವಾಗಿದೆ.

ವಾಹನದ ದಟ್ಟಣೆ ಹೆಚ್ಚಿದೆ ಎನ್ನುವ ಕಾರಣಕ್ಕೆ ಸಾಗರ ನಗರದ ಹೊರವಲಯದಲ್ಲಿರುವ ತ್ಯಾಗರ್ತಿ ವೃತ್ತದಿಂದ ಎಲ್‌ಬಿ ಕಾಲೇಜು ವೃತ್ತದವರೆಗೆ ಹೆದ್ದಾರಿ ವಿಸ್ತರಣೆ ಕಾಮಗಾರಿ ಆರಂಭಗೊಂಡಿದೆ. ಅದಕ್ಕಾಗಿ ರಸ್ತೆಯ ಇಕ್ಕೆಲಗಳಲ್ಲಿನ 100 ವರ್ಷಕ್ಕೂ ಹೆಚ್ಚಿನ ಅವಧಿಯ 488 ಮರಗಳನ್ನು ಉರುಳಿಸಲಾಗುತ್ತಿದೆ. ಇದರಿಂದಾಗಿ ನಗರದ ಚಹರೆಯೇ ಬದಲಾಗುತ್ತಿದೆ. ರಸ್ತೆಯ ಒಂದು ಬದಿಯ ಮರಗಳನ್ನು ಉಳಿಸಿಕೊಂಡು ರಸ್ತೆಯ ವಿಸ್ತರಣೆ ಕಾರ್ಯ ಮಾಡಲಾಗುವುದು ಎಂಬ ಜನಪ್ರತಿನಿಧಿಗಳ ಭರವಸೆ ಸುಳ್ಳಾಗಿದೆ.

ನಗರ ಹಾಗೂ ಅದಕ್ಕೆ ಹೊಂದಿಕೊಂಡಿರುವ ಹೊರ ವಲಯದಲ್ಲಿ ಹೊಸ ಬಡಾವಣೆಗಳ ನಿರ್ಮಾಣ ಕಾನೂನಿನ ನಿಯಮಗಳನ್ನು ಉಲ್ಲಂಘಿಸಿ, ಎಗ್ಗಿಲ್ಲದೆ ಸಾಗುತ್ತಿದೆ. ಬಡ ಹಾಗೂ ಮಧ್ಯಮ ವರ್ಗದವರಿಗೆ ನಿವೇಶನ, ಮನೆ ವಿತರಿಸುವುದು ತಮ್ಮ ಕೆಲಸವೇ ಅಲ್ಲ ಎನ್ನುವಂತೆ ಪ್ರಭುತ್ವ ವರ್ತಿಸುತ್ತಿದೆ. ಹಳ್ಳಿಗಳಲ್ಲಿ ಜೆಸಿಬಿ ಕಲ್ಲುಕ್ವಾರೆಗಳಿಗಾಗಿ ಗುಡ್ಡಗಳನ್ನು ಕಬಳಿಸುತ್ತಿವೆ.

ಜಲಮೂಲಗಳ ಸಂರಕ್ಷಣೆಯಲ್ಲಿ ತೋರಿದ ನಿಷ್ಕಾಳಜಿಯಿಂದಾಗಿ ಮಲೆನಾಡಿನ ಈ ಭಾಗದಲ್ಲೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಕೆರೆಗಳ ಒತ್ತುವರಿ ಬಗ್ಗೆ ಆಡಳಿತ ಮೌನವಾಗಿದೆ. ಕೆರೆಗಳ ಹೂಳು ತೆಗೆದು ಅಭಿವೃದ್ಧಿ ಮಾಡುವ ಬದಲು ತೋರುಗಾಣಿಕೆಯ ಅಭಿವೃದ್ಧಿಯನ್ನೇ ದೊಡ್ಡದಾಗಿ ಪ್ರಚಾರ ಮಾಡುವ ಪ್ರದರ್ಶನಪ್ರಿಯತೆ ಸಾಮಾನ್ಯವಾಗಿದೆ.

ಪರಿಸರ-ಅಭಿವೃದ್ಧಿಯ ನಡುವೆ ಸಮತೋಲನ ಇರಬೇಕು ಎಂಬ ಮಾತು ನಿಜವಾದ ಅರ್ಥದಲ್ಲಿ ಜಾರಿಗೊಳ್ಳಬೇಕಿದೆ ಎಂಬುದು ಈ ಭಾಗದ ಜನರ ಹಕ್ಕೊತ್ತಾಯ. ಹೆಚ್ಚುತ್ತಿರುವ ಉಷ್ಣಾಂಶ, ಅಕಾಲಿಕ ಮಳೆ, ಬೆಳೆ ನಾಶ ಮೊದಲಾದ ವಿಕೋಪಗಳಿಂದ ಪಾರಾಗಲು ಸುಸ್ಥಿರ ಅಭಿವೃದ್ಧಿಯ ಮಾದರಿ ನಮ್ಮದಾಗಬೇಕು ಎಂಬ ಜನಮಾನಸದ ಆಶಯಕ್ಕೆ ಮನ್ನಣೆ ದೊರಕಬೇಕಿದೆ.

ಅಭಿವೃದ್ಧಿಯ ನೆಪ: ಬದಲಾಗುತ್ತಿದೆ ಜೋಗದ ಸ್ವರೂಪ:

ಜಗತ್ಪ್ರಸಿದ್ಧ ಜೋಗ ಜಲಪಾತ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ರೋಪ್‌ವೇ, ಜಿಪ್ ಲೈನ್, ಪಂಚತಾರಾ ಹೋಟೆಲ್, ವಾಕಿಂಗ್ ಪಾತ್, ಸಂಗೀತ ಕಾರಂಜಿ, ಈಜುಕೊಳ ಮೊದಲಾದ ಯೋಜನೆ ಕಾರ್ಯರೂಪಕ್ಕೆ ಬರಲು ಸಿದ್ಧವಾಗಿದೆ. ಆದರೆ, ಸರ್ವಋತು ಜಲಪಾತ ಯೋಜನೆ ಮಾಡಲು ಹೋಗಿ ಜೋಗ ಜಲಪಾತದ ಸಹಜ ಸೌಂದರ್ಯಕ್ಕೆ ಧಕ್ಕೆ ಉಂಟಾಗುವ ಭೀತಿ ಎದುರಾಗಿದೆ.

ಈಗಾಗಲೇ ವಿವಿಧ ಕಾಮಗಾರಿಗಳ ಭಾರದಿಂದ ಎರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ಜೋಗ ಜಲಪಾತದ ಸಮೀಪದ ಪ್ರವಾಸಿ ಮಂದಿರದ ಗುಡ್ಡ ಕುಸಿಯುವ ಹಂತಕ್ಕೆ ಬಂದಿತ್ತು. ಅಭಿವೃದ್ಧಿಗಾಗಿ ಜೋಗದ ಸುತ್ತಮುತ್ತಲಿನ ಹಸಿರು ಪ್ರದೇಶ ನಾಶ ಮಾಡಲಾಗಿದೆ. ಕಾಂಕ್ರೀಟ್‌ ಕಟ್ಟಡ ನಿರ್ಮಿಸಿ, ಮಾಲ್ ಸಂಸ್ಕೃತಿ ತರುತ್ತಿರುವ ಬಗ್ಗೆ ಪರಿಸರ ಕಾರ್ಯಕರ್ತರು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ.

‘ಜೋಗ ಜಲಪಾತ ಈಗ ಇರುವ ಸ್ಥಿತಿಯಲ್ಲೆ ಇರಬೇಕೆ? ಒಂದಿಷ್ಟು ಬದಲಾವಣೆ ಬೇಡವೇ? ತನ್ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಯಾಗಿ ಉದ್ಯೋಗ ಸೃಷ್ಟಿಯಾಗುತ್ತದೆ. ಅಲ್ಲದೆ ಅದು ಸ್ಥಳೀಯವಾಗಿ ವ್ಯಾಪಾರ ಉದ್ಯಮದ ಬೆಳವಣಿಗೆಗೂ ಕಾರಣವಾಗುತ್ತದೆ’ ಎನ್ನುವುದು ಕೆಲವರ ವಾದ.

ಜೀವ ವೈವಿಧ್ಯಕ್ಕೆ ಮಾರಕವಾದ ನೆಡುತೋಪುಗಳು

ಶಿವಮೊಗ್ಗ: ಕಾಗದ ತಯಾರಿಕೆಗೆ ಅಗತ್ಯವಾದ ಕಚ್ಚಾ ಸಾಮಗ್ರಿ ಪೂರೈಸಿಕೊಳ್ಳಲು ಭದ್ರಾವತಿಯ ಮೈಸೂರು ಪೇಪರ್‌ ಮಿಲ್ಸ್‌ಗೆ (ಎಂಪಿಎಂ) ನೈಸರ್ಗಿಕ ಮರಗಿಡಗಳಿದ್ದ 22,500 ಹೆಕ್ಟೇರನ್ನು 1980ರಲ್ಲಿ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗೆ ನೀಡಲಾಗಿತ್ತು. ನಂತರ ಅಲ್ಲಿನ ಪ್ರಾಣಿ, ಪಕ್ಷಿ ಸಂಕುಲಕ್ಕೆ ಆಸರೆಯಾಗಿದ್ದ ಶಿವನೆ, ತಾರೆ, ಶಮಿ, ಸುರಗಿ, ಮುತ್ತುಗ, ಸರ್ವ ಸಾಂಬಾರ, ಮಹಾಗನಿ, ಖದಿರಾ, ಮತ್ತಿ, ಅತ್ತಿ, ನಂಜಿನ ಕಾಯಿಮರ, ಅಳಲೆ, ವಾಟೆ, ಅಂಟುವಾಳ, ಸೀಗೆ, ಸಂಪಿಗೆ, ಬಿದಿರು ಮತ್ತು ಹಲಸು, ಮಾವು, ಪೇರಳೆ, ಸಿಹಿ ಅಮಟೆ, ಕವಳಿ, ಪರಗಿ, ಬಿಳಿ ಮುಳ್ಳು ಹಣ್ಣು, ನುರುಕಲು ಹಣ್ಣು, ಈಚಲು, ಬುಕ್ಕೆ, ನೆಲ್ಲಿ, ಮದ್ದರಸಿ ಸೇರಿ ನೂರಾರು ಸಸ್ಯ ಪ್ರಭೇದಗಳನ್ನು ನಾಶ ಮಾಡಿ ಅಕೇಶಿಯಾ, ನೀಲಗಿರಿ, ಫೈನಸ್‌ ಮತ್ತಿತರ ಏಕ ಜಾತಿಯ ಸಸ್ಯ ಪ್ರಭೇದಗಳನ್ನು ಒಳಗೊಂಡ ನೆಡುತೋಪುಗಳನ್ನು ಬೆಳೆಸಲಾಗಿತ್ತು.‌

ಗೇರುಸೊಪ್ಪಾ, ಶಂಕರನಾರಾಯಣ (ವಾರಾಹಿ), ಕತಗಾಲ (ಅಘನಾಶಿನಿ), ಕಾಳಿ, ಬೇಡ್ತಿ, ಶರಾವತಿ ಕಣಿವೆಗಳು, ತುಂಗಾ, ಭದ್ರಾ, ಕಾವೇರಿ ಕಣಿವೆಗಳಲ್ಲಿ,ದಕ್ಷಿಣದ ಚಿರಾಪುಂಜಿ ಎಂದೇ ಕರೆಯುವ ಆಗುಂಬೆ ವ್ಯಾಪ್ತಿಯಲ್ಲೂ ನೆಡುತೋಪುಗಳನ್ನು ಬೆಳೆಸಲಾಗಿದೆ. ಕೋಗಾರ, ಅಮ್ಮನಘಟ್ಟ, ನಗರ, ಜೋಯಿಡಾ, ತಿನೇಘಾಟ್, ಬಿಸಗೋಡು, ನಂದೊಳ್ಳಿ, ಕದ್ರಾ, ವಾನಳ್ಳಿ, ಉಂಚಳ್ಳಿ, ಕೊಡಚಾದ್ರಿ, ಬಸರಿಕಟ್ಟೆ, ಕುಮಾರಧಾರಾ, ಕೊಪ್ಪ, ಕಳಸ, ಸಾಲ್ಕೋಡ, ಮಹಿಮೆ ಕ್ಯಾದಗಿ, ಮಸ್ಕಿ, ಹೆಗ್ಗರಣಿ ಮೊದಲಾದ ಇಳಿಜಾರು ಬೆಟ್ಟಗಳ ಸೂಕ್ಷ್ಮ ಪ್ರದೇಶಗಳಲ್ಲೂ ನೆಡುತೋಪುಗಳಿವೆ.

ಫೈನಸ್, ಅಕೇಶಿಯಾ ಮರಗಳ ಬೆಳವಣಿಗೆ ಪರಿಣಾಮ ಮಲೆನಾಡಿನ ನೆಲದ ಪರಿಸರ ಬದಲಾಗಿದೆ. ಮೇಲ್ಮಣ್ಣು ಹೊಳೆದಂಡೆಯ ಮರಳಿನಂತೆ ಪರಿವರ್ತನೆಯಾಗಿದೆ. ಹುಲ್ಲುಗಾವಲುಗಳು ನಾಶವಾಗಿವೆ. ಜಲಮೂಲಗಳು ಬತ್ತಿಹೋಗಿವೆ. ವನ್ಯ ಜೀವಿಗಳು ಆಹಾರವಾಗಿ ಬಳಸದ ಕಾರಣ ಸಮೀಪದ ಕೃಷಿ ಭೂಮಿಗೆ ದಾಳಿ ಮಾಡುತ್ತಿವೆ. ಗೂಡು ಕಟ್ಟಲೂ ಯೋಗ್ಯವಲ್ಲದ ಈ ಮರಗಳು ಪಕ್ಷಿ ಸಂಕುಲಕ್ಕೂ ಪ್ರಯೋಜನವಿಲ್ಲ.

ತುಂಗಾ ತಿರುವು; 25 ಸಾವಿರ ಮರಗಳ ನಾಶ

ತುಂಗಾ ತಿರುವು ಯೋಜನೆಯ ಕಾಲುವೆ ನಿರ್ಮಾಣಕ್ಕೆ 250 ಎಕರೆ ದಟ್ಟ ಕಾಡಿನೊಳಗಿನ 25 ಸಾವಿರ ಮರಗಳನ್ನು ಕಡಿಯಲಾಗಿದೆ. ತುಂಗಾ ತಿರುವು ಭದ್ರಾ ಮೇಲ್ದಂಡೆ ಯೋಜನೆಯ ಭಾಗ. ಆದರೆ, ಮರಗಳ್ಳರ ಮಾಫಿಯಾಕ್ಕೆ ಅನುಕೂಲ ಮಾಡಿಕೊಡಲು ದಟ್ಟ ಅರಣ್ಯದ ಮೂಲಕ ನಾಲೆ ಹಾದು ಹೋಗುವಂತೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸಲು ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಬಳಿಯಿಂದ ಕಾಲುವೆಯ ಮೂಲಕ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಕುಸುಬೂರು, ತೂಬಿನಕೆರೆ, ಸಾತ್ಕೋಳಿ, ದೊಡ್ಡಿನತಲೆ ಮೊದಲಾದ ಗ್ರಾಮಗಳ ಮೂಲಕ ಈ ಕಾಲುವೆ ಹಾದು ಹೋಗುತ್ತದೆ. ನಂತರ ರಕ್ಷಿತಾರಣ್ಯ ದಾಟಿ ಮಾರಿದಿಬ್ಬದ ಬಳಿ ಭದ್ರಾ ಅಣೆಕಟ್ಟೆಗೆ ನೀರು ಹರಿಸಲಾಗುತ್ತಿದೆ.

ಶಿವಮೊಗ್ಗ, ಉಡುಪಿ ರಸ್ತೆ ವಿಸ್ತರಣೆ, ಶಿವಮೊಗ್ಗ–ರಾಣೆಬೆನ್ನೂರು ಮಾರ್ಗ, ಶಿವಮೊಗ್ಗ–ಶೃಂಗೇರಿ, ಹೊನ್ನಾವರ ಮಾರ್ಗಗಳ ವಿಸ್ತರಣೆಯಲ್ಲೂ ಸಾಕಷ್ಟು ಮರಗಳನ್ನು ನಾಶ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT