ಶಿವಮೊಗ್ಗ: ವಾಹನ ಸವಾರರು, ಪಾದಚಾರಿಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಆರು ಆರೋಪಿಗಳನ್ನು ಬಂಧಿಸಿರುವ ಜಿಲ್ಲಾ ಪೊಲೀಸರು ₹9.31 ಲಕ್ಷ ಮೌಲ್ಯದ ಚಿನ್ನಾಭರಣ, ಎರಡು ಪಿಸ್ತೂಲ್, 12 ಜೀವಂತ ಗುಂಡು ವಶಪಡಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಮೀರತ್ ನಗರದ ಫೈಸಲ್ (25), ಸಲ್ಮಾನ್ (24), ಆಶಿಸ್ ಕುಮಾರ್ (36), ಮೆಹತಾಬ್ (35), ಸಲ್ಮಾನ್(22) ಹಾಗೂ ಮೊಹಮದ್ ಚಾಂದ್ (23) ಬಂಧಿತ ಆರೋಪಿಗಳು.
ಶಿವಮೊಗ್ಗ ಜೋಸೆಫ್ ನಗರದಲ್ಲಿ ವಾಸಿವಿದ್ದ ಮೊಹಮದ್ ಚಾಂದ್ ಸಹಕಾರದಿಂದ ಉಳಿದ ಆರೋಪಿಗಳು ರಾಜ್ಯಕ್ಕೆ ಬಂದಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಗರದಲ್ಲಿ ಸರಗಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ವಿದ್ಯಾನಗರದ ಮತ್ತೂರು ರಸ್ತೆಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಇದೇ ಆರೋಪಿಗಳು 2019ರಲ್ಲಿ 4 ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಉತ್ತರ ಪ್ರದೇಶದಲ್ಲೂ ಇವರ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ವಿವರ ನೀಡಿದರು.
ವಿಶೇಷ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ತಂಡಕ್ಕೆ ₹ 20 ಸಾವಿರ ಬಹುಮಾನ ಘೋಷಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಟಿ.ಶೇಖರ್, ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ, ಕೋಟೆ ಠಾಣೆ ಸಿಪಿಐ ಟಿ.ಕೆ.ಚಂದ್ರಶೇಖರ್ ಇದ್ದರು.