ಶಿರಾಳಕೊಪ್ಪ: ಸಮೀಪದ ಕಡೇನಂದಿಹಳ್ಳಿ ಗ್ರಾಮದ ‘ವಿಷ್ಣು ದಾದ’ ಎನ್ನುವ ಹೋರಿಯು ಮಂಗಳವಾರ ಮೃತಪಟ್ಟಿದೆ.
ಹೋರಿ ಹಬ್ಬದ ಅಭಿಮಾನಿಗಳಿಗೆ ಚಿರಪರಿಚಿತವಾಗಿದ್ದ ಈ ಹೋರಿಯು ಶಿಕಾರಿಪುರ, ಸೊರಬ, ಹಾನಗಲ್, ಹಾವೇರಿ, ರಾಣೆಬೆನ್ನೂರು ಸೇರಿ ಶಿವಮೊಗ್ಗ, ಹಾವೇರಿ ಜಿಲ್ಲೆಯ ಹೋರಿ ಹಬ್ಬದ ಸ್ಪರ್ಧೆಯಲ್ಲಿ ಸಾಕಷ್ಟು ಬಹುಮಾನಗಳನ್ನು ಪಡೆದಿದೆ.
ಅಕ್ಕಿ ಆಲೂರಿನಲ್ಲಿ ಫ್ರಿಜ್, ಶಿಗ್ಗದಲ್ಲಿ ಗಾಡ್ರೇಜ್, ಕೋಡದಲ್ಲಿ ಉಂಗುರ, ಮಾಸೂರಿನಲ್ಲಿ ಬೆಳ್ಳಿ ಗದೆ ಪಡೆಯುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದೆ. ಹೋರಿಯನ್ನು ಗ್ರಾಮದ ಯುವಕರು ಟ್ರ್ಯಾಕ್ಟರ್ನಲ್ಲಿ ಮೆರವಣಿಗೆ ಮಾಡಿ ಅಂತ್ಯಸಂಸ್ಕಾರ ಮಾಡಿದರು.
‘ಹೋರಿಯನ್ನು 6 ವರ್ಷಗಳಿಂದ ಮನೆಯ ಮಗುವಿನಂತೆ ಸಾಕಿದ್ದೆವು. ಕಳೆದ ವಾರ ₹ 2 ಲಕ್ಷಕ್ಕೆ ಕೇಳಿದ್ದರು. ಕೊಡದೆ, ಪ್ರಿತಿಯಿಂದ ಉಳಿಸಿಕೊಂಡಿದ್ದೆವು. ಈಗ ಮೃತ ಪಟ್ಟಿರುವುದು ತುಂಬಾ ನೋವು ತಂದಿದೆ’ ಎಂದು ಹೋರಿ ಮಾಲೀಕ ಶರತ್ ಗಂಗಪ್ಪಳ್ಳಿ ಪ್ರತಿಕ್ರಿಯಿಸಿದರು.
ವಿಷ್ಣು ದಾದ ಗೆಳೆಯರ ಬಳಗದ ಸುನಿಲ್ ಮುತ್ತಿಗೆ, ಎಸ್.ದಿನೇಶ್, ಬಿ.ಪಿ.ಶರಣ, ಬಸವರಾಜ್ ಗಂಗಪ್ಪಳ್ಳಿ, ಕುಮಾರ್ ಮಟ್ಟಿಮನಿ ಸೇರಿ ಪ್ರಮುಖರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.