ಶಿಕಾರಿಪುರ: ‘ಜಾತಿ, ಧರ್ಮ ಭೇದವಿಲ್ಲದೇ ನಾವೆಲ್ಲರೂ ಸದೃಢ ದೇಶ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಉರ್ದು ಸಾಹಿತಿ ಡಾ.ಮೌಲಾನಾ ಅಮ್ಜದ್ ಹುಸೇನ್ ಹಾಫೀಜ್ ಕರ್ನಾಟಕಿ ಸಲಹೆ ನೀಡಿದರು.
ಪಟ್ಟಣದ ಜಾಮಿಯಾ ಶಾದಿಮಹಲ್ ಪಕ್ಕದಲ್ಲಿ ಶನಿವಾರ ಅಂಜುಮಾನ್–ಎ–ಇಸ್ಲಾಂ ಜಾಮಿಯಾ ಮಸೀದಿ ಕಮಿಟಿ ನೂತನ ಕಚೇರಿ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಈ ದೇಶದ ಸ್ವಾತಂತ್ರ್ಯಕ್ಕಾಗಿ ಯಾವುದೇ ಒಂದು ಧರ್ಮ ಹಾಗೂ ಜಾತಿ ಜನರು ಹೋರಾಟ ನಡೆಸಿಲ್ಲ. ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿದ್ದಾರೆ. ಮುಸ್ಲಿಮರು ಹಿಂದೂಗಳ ಜತೆ ಉತ್ತಮ ಬಾಂಧವ್ಯ ಹೊಂದಬೇಕು. ನಮ್ಮ ಮಸೀದಿಗಳಿಗೆ ಅವರನ್ನು ಕರೆದು ನಮ್ಮ ಸಂಪ್ರದಾಯ ತಿಳಿಸಬೇಕು.ಮುಸ್ಲಿಮರು ಶಿಯಾ, ಸುನ್ನಿ ಎಂದು ಒಳಪಂಗಡಗಳ ಬಗ್ಗೆ ಜಗಳವಾಡದೇ ಒಗ್ಗಟ್ಟಿನಿಂದ ಪರಸ್ಪರ ಸೌಹರ್ದಯುತವಾದ ಜೀವನ ನಡೆಸಬೇಕು’ ಎಂದು ಕಿವಿಮಾತು ಹೇಳಿದರು.
‘ಜಾಮಿಯಾ ಮಸೀದಿ ಕಚೇರಿ ಜನರ ಕಷ್ಟಗಳನ್ನು ಹಾಗೂ ಸಮಸ್ಯೆಗಳನ್ನು ಪರಿಹಾರ ಮಾಡುವ ಕೇಂದ್ರವಾಗಬೇಕು. ಈ ಸ್ಥಳದಲ್ಲಿ ಹಿರಿಯ ನಾಗರಿಕರಿಗೆ ವೃದ್ಧಾಶ್ರಮ ಆರಂಭಿಸಲು ಹಾಗೂ ಮೃತಪಟ್ಟವರ ದೇಹವನ್ನು ಖಬರಸ್ತಾನಕ್ಕೆ ಒಯ್ಯಲು ಉಚಿತ ಆಂಬುಲೆನ್ಸ್ ಸೇವೆ ನೀಡಲು ಮುಂದಾಗಲಿದೆ. ಜಾಮಿಯಾ ಮಸೀದಿ ರಾಜಕೀಯೇತರ
ವಾಗಿ ಸಮುದಾಯದ ಜನರ ಕಷ್ಟಕ್ಕೆ ಸ್ಪಂದಿಸಲಿದೆ. ಸಮಾಜಕ್ಕಾಗಿ ಕೊಡುಗೆ ನೀಡುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಫಯಾಜ್ ಆಹಮದ್, ನಿರ್ದೇಶಕ ಸೈಯದ್, ಪುರಸಭೆ ಸದಸ್ಯ ರೋಷನ್, ಮಾಜಿ ಸದಸ್ಯರಾದ ಎಚ್.ಎಸ್. ಜಾಫರ್ ಆಲಿಖಾನ್, ಸೈಯದ್ ಫೀರ್, ಜಾಮಿಯಾ ಮಸೀದಿ ಸಮಿತಿ ಮಾಜಿ ಅಧ್ಯಕ್ಷ ವಜೀರ್ ಸಾಬ್, ಉಪಾಧ್ಯಕ್ಷರಾದ ಕರೀಂಸಾಬ್, ಹಬೀಬುಲ್ಲಾ, ಕಾರ್ಯದರ್ಶಿ ಮಕ್ಬೂಲ್, ಖಜಾಂಚಿ ಅಶ್ರಫುಲ್ಲಾ, ಪದಾಧಿಕಾರಿಗಳಾದ ರಹಮತ್ ವುಲ್ಲಾ ಪಟೇಗಾರ್, ಅಸ್ಲಾಂಸಾಬ್, ಸೈಯದ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.