ಕುಣಿಗಲ್: ‘ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ₹ 1 ಲಕ್ಷ ಮತ್ತು ನೀರು ನುಗ್ಗಿ ಹಾಳಾಗಿರುವ ಮನೆಗಳಿಗೆ ₹ 10 ಸಾವಿರ ಪರಿಹಾರ ನೀಡಲು ಸೂಚಿಸಲಾಗಿದೆ’ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.
ತಾಲ್ಲೂಕಿನ ಜಲಧಿಗೆರೆ ಮತ್ತು ಬ್ಯಾಲದಲ್ಲಿ ಮಳೆಯಿಂದ ಹಾನಿಯಾಗಿರುವ ಬೆಳೆಗಳನ್ನು ಬುಧ ವಾರ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಎನ್.ಡಿ.ಆರ್.ಎಫ್ನಿಂದ ₹ 900 ಕೋಟಿ ಬಿಡುಗಡೆ ಕೋಡಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ 5 ಲಕ್ಷ ಹೆಕ್ಟೇರ್ನಲ್ಲಿ ಬೆಳೆ ನಾಶವಾಗಿದೆ. ಹತ್ತು ದಿನದಲ್ಲಿ ಬೆಳೆ ಹಾನಿ ವರದಿ ಸಲ್ಲಿಸಿ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಅಕಾಲಿಕ ಮಳೆಯಿಂದಾಗಿ ನಷ್ಟಕ್ಕೊಳಗಾಗಿರುವ ರೈತರಾಗಲಿ, ಮನೆ ಕಳೆದುಕೊಂಡವರಾಗಲಿ ಆತಂಕಪಡುವುದು ಬೇಡ. ಸರ್ಕಾರ ಬೆಳೆ ಹಾನಿಯಾದ ರೈತರ ನೆರವಿಗೆ ₹ 358 ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದರು.
ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಬೆಳೆ ಪರಿಹಾರ ಧನ ನಿಗದಿಪಡಿಸಿದ್ದಾರೆ. ಪ್ರಸ್ತುತ ರಾಗಿ ಬೆಳೆಗೆ ಒಂದು ಹೆಕ್ಟೇರ್ಗೆ ₹ 6,800 ಪರಿಹಾರ ನೀಡಲಾಗುತ್ತಿದೆ. ಇದನ್ನು ₹ 20 ಸಾವಿರಕ್ಕೆ ಹೆಚ್ಚಿಸಬೇಕು. ತೋಟಗಾರಿಕೆ ಬೆಳೆಗಳಿಗೆ ₹ 18 ಸಾವಿರ ನೀಡುತ್ತಿದ್ದು, ₹ 40 ಸಾವಿರಕ್ಕೇರಿಸಲು ಮನವಿ ಸಲ್ಲಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ವೈ.ಎಸ್, ಪಾಟೀಲ, ಉಪ ವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮಹಬಲೇಶ್ವರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರಾಜಸುಲೋಚನಾ, ಉಪ ನಿರ್ದೇಶಕಿ ದೀಪಶ್ರೀ, ಅಶೋಕ, ಸಹಾಯಕ ನಿರ್ದೇಶಕಿ ಸೌಮ್ಯಶ್ರೀ, ಪಿಎಲ್ಡಿ ಬ್ಯಾಂಕ್ ರಾಜ್ಯ ಘಟಕದ ಅಧ್ಯಕ್ಷ ಡಿ. ಕೃಷ್ಣಕುಮಾರ್ ಇದ್ದರು.
ಶಾಸಕರ ಮನವಿ: ಶಾಸಕ ಡಾ.ರಂಗನಾಥ್ ಜಲಧಿಗರೆಯಲ್ಲಿ ಸಚಿವ ಅಶೋಕ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ತಾಲ್ಲೂಕಿನಲ್ಲಿ ಶೇ 50ರಷ್ಟು ಬೆಳೆ ನಾಶವಾಗಿದೆ. ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆ ಮಾಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಬೆಳೆ ಪರಿಹಾರ ಧನವನ್ನು ₹ 6,800ರಿಂದ ₹ 25 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.