ತುಮಕೂರು: ಬಂದೂಕಿನಿಂದ ಗುಂಡು ಹಾರಿಸಿ ಹೆಂಡತಿಯನ್ನು ಗಂಡನೇ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಗೂಳೂರು ಹೋಬಳಿ ಡಿ.ಕೊರಟಗೆರೆ ಗ್ರಾಮದ ಎ.ಡಿ.ಕಾಲೊನಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಶಾರದ (32) ಕೊಲೆಯಾದ ಮಹಿಳೆಯಾಗಿದ್ದು, ಈಕೆ ಪತಿ ಕೃಷ್ಣಯ್ಯ ಕೊಲೆ ಆರೋಪಿ. ನಾಯಕ ಜನಾಂಗಕ್ಕೆ ಸೇರಿದ ಕೃಷ್ಣಯ್ಯ ಕಳೆದ 12 ವರ್ಷಗಳ ಹಿಂದೆ ಪರಿಶಿಷ್ಟ ಜಾತಿಯ ಶಾರದ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಮಹಿಳೆಯ ತಂದೆಗೆ ಸೇರಿದ ಮನೆಯಲ್ಲಿ ವಾಸವಾಗಿದ್ದರು.
ಕೃಷ್ಣಯ್ಯ ಸ್ನೇಹಿತ ಮಾಗಡಿ ತಾಲ್ಲೂಕು ಚೌಡಿಬೇಗೂರು ಗ್ರಾಮದ ಸುನಿಲ್ ಬಳಿ ಬಂದೂಕು ಇದ್ದು, ಆಗಾಗ ಬೇಟೆಗೆ ಹೋಗುತ್ತಿದ್ದರು. ಕೆಲವೊಮ್ಮೆ ಮನೆಯಲ್ಲೇ ತಂಗುತ್ತಿದ್ದರು. ಜ. 10ರಂದು ಬೇಟೆಯಾಡಲು ಹೋಗಿದ್ದು, ನಂತರ ಬಂದೂಕನ್ನು ಕೃಷ್ಣಯ್ಯ ಅವರ ಮನೆಯಲ್ಲೇ ಇಟ್ಟು ಹೋಗಿದ್ದರು.
ಶಾರದ ಪಟಾಕಿ ಚೀಟಿ ನಡೆಸುತ್ತಿದ್ದು, ಸೋಮವಾರ ರಾತ್ರಿ ಜನರಿಂದ ಚೀಟಿ ಹಣ ಸಂಗ್ರಹಿಸಿದ್ದರು. ನಂತರ ಮನೆಯಲ್ಲಿ ಗಂಡ, ಹೆಂಡತಿ ಇಬ್ಬರೇ ಇದ್ದ ಸಮಯದಲ್ಲಿ ಮಾತಿಗೆ ಮಾತು ಬೆಳೆದು ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಳ ಸಹೋದರ ಅರುಣ್ ಕುಮಾರ್ ದೂರು ನೀಡಿದ್ದು, ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.