ತುಮಕೂರು: ಬೆಳೆ ಸಾಲ ಮೊತ್ತ ₹ 50 ಸಾವಿರದ ಚೆಕ್ ನೀಡಲು ₹ 5 ಸಾವಿರ ಲಂಚ ಪಡೆಯುತ್ತಿದ್ದ ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ದೊಡ್ಡಗುಣಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಓಂಕಾರಮೂರ್ತಿ ಬ್ರಷ್ಟಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.
ನಿಟ್ಟೂರು ಹೋಬಳಿ ಹೊನ್ನೇನಹಳ್ಳಿ ಗ್ರಾಮದ ನಿವಾಸಿಯೊಬ್ಬರು ತಮ್ಮ ಜಮೀನಿಗೆ ಬೆಳೆ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದರು.
ಇವರಿಗೆ ₹ 50 ಸಾವಿರ ಬೆಳೆ ಸಾಲ ಮಂಜೂರಾಗಿತ್ತು. ಸಾಲದ ಮೊತ್ತದ ಚೆಕ್ ನೀಡಲು ₹ 5000 ಲಂಚಕ್ಕೆ ಓಂಕಾರಮೂರ್ತಿ ಬೇಡಿಕೆ ಇಟ್ಟಿದ್ದರು. ಗುರುವಾರ ಬೆಳಿಗ್ಗೆ ಲಂಚದ ಮೊತ್ತ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ಬಂಧಿಸಿದೆ.
ಆರೋಪಿ ಕಡೆಯಿಂದ ಲಂಚದ ಮೊತ್ತ ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಎಸಿಬಿ ಡಿಎಸ್ಪಿ ರಘುಕುಮಾರ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಹಾಲಪ್ಪ, ಸಿಬ್ಬಂದಿ ಶಿವಣ್ಣ, ಗಿರೀಶ್, ಪದ್ಮನಾಭ, ನರಸಿಂಹರಾಜು, ಮಹೇಶ್ ಅವರ ತಂಡ ಈ ದಾಳಿ ನಡೆಸಿದೆ.