ಕೊರಟಗೆರೆ: ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕ ಫೆಡರೇಷನ್ ಸದಸ್ಯರು ತಾಲ್ಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಬಿಸಿಯೂಟ ತಯಾರಕರಿಗೆ ಬಾಕಿ ಇರುವ ಜೂನ್ ಹಾಗೂ ಜುಲೈ ತಿಂಗಳ ವೇತನ ಬಿಡುಗಡೆಗೊಳಿಸಬೇಕು. ಸದ್ಯ ನೀಡುತ್ತಿರುವ ವೇತನ ತೀರಾ ಕಡಿಮೆ ಇದ್ದು, ಇಂದಿನ ದಿನಗಳಲ್ಲಿ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಆದ ಕಾರಣ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಜಾರಿಗೊಳಿಸಿ ಕನಿಷ್ಠ ವೇತನ ಜಾರಿಗೊಳಿಸಬೇಕು. ಅಸಂಘಟಿತ ಕಾರ್ಮಿಕ ವಲಯಕ್ಕೆ ನೀಡಿದಂತೆ ಬಿಸಿಯೂಟ ತಯಾರಕರಿಗೂ ಲಾಕ್ಡೌನ್ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
60 ವರ್ಷ ದಾಟಿದವರನ್ನು ವಯೋಮಿತಿ ಆಧಾರದಲ್ಲಿ ಕೆಲಸದಿಂದ ಬಿಡುಗಡೆಗೊಳಿಸದೆ ಕೆಲಸದಲ್ಲೆ ಮುಂದುವರೆಸಬೇಕು. ಪ್ರತಿ ಶಾಲೆಯಲ್ಲಿ ಇಬ್ಬರು ಅಡುಗೆಯವರು ಕಡ್ಡಾಯವಾಗಿ ಇರುವಂತೆ ನಿಯಮ ರೂಪಿಸಬೇಕು. ಬಿಸಿಯೂಟ ತಯಾರಕರ ಮೇಲ್ವಿಚಾರಣೆ ಎಸ್ಡಿಎಂಸಿ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗೆ ವಹಿಸದೇ ಶಿಕ್ಷಣ ಇಲಾಖೆಯಿಂದಲೇ ಮೇಲ್ವಿಚಾರಣೆ ನಿರ್ವಹಿಸಲು ನಿಯಮ ರೂಪಿಸಬೇಕು. ಬಿಸಿಯೂಟ ತಯಾರಿಕೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ತೀರ್ಮಾನವನ್ನು ಸರ್ಕಾರ ಕೈಬಿಡಬೇಕು. ನೌಕರರನ್ನು ಖಾಯಂಗೊಳಿಸಬೇಕು ಎಂದು ಪ್ರತಿಭಟನನಿರತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾ ಸಂಚಾಲಕ ಕಾಂತರಾಜು, ಪಾರ್ವತಮ್ಮ, ಫಜಲ್ ಉನ್ನಿಸ್ಸಾ, ಲಕ್ಷ್ಮಮ್ಮ, ನಾಗರತ್ನಮ್ಮ, ಎ.ಬಿ.ಉಮಾದೇವಿ ಇದ್ದರು.