ತುಮಕೂರು: ಅಗಾಧವಾದ ಜ್ಞಾನ ಹೊಂದಿದ್ದ ಡಾ.ಬಿ.ಆರ್.ಅಂಬೇಡ್ಕರ್, ತಮ್ಮ ಜೀವಿತದ ಕೊನೆಯಅವಧಿಯವರೆಗೂ ಜ್ಞಾನದ ಹುಡುಕಾಟದಲ್ಲಿ ತೊಡಗಿದ್ದರು ಎಂದು ದಲಿತ ಛಲವಾದಿ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪಿ.ಚಂದ್ರಪ್ಪ ಹೇಳಿದರು.
ದಲಿತ ಛಲವಾದಿ ಮಹಾಸಭಾದಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಅಂಬೇಡ್ಕರ್ ಜೀವನ, ಬದುಕಿದ ರೀತಿ ಅನೇಕರಿಗೆ ಮಾದರಿ. ಇಂದಿನ ಯುವಕರು ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
ವಕೀಲ ರಾಜಣ್ಣ, ‘ಭಾರತೀಯರಲ್ಲೇ ಡಾಕ್ಟರೇಟ್ ಪಡೆದ ಮೊದಲಿಗರು ಅಂಬೇಡ್ಕರ್. 64 ವಿಷಯಗಳಲ್ಲಿ ವಿಶೇಷ ಅಧ್ಯಯನ ನಡೆಸಿದ್ದರು. ದೇಶದ 9 ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಅವರ ಸಮ ಸಮಾಜದ ಕನಸನ್ನು ನಾವೆಲ್ಲರೂ ನನಸು ಮಾಡಬೇಕಾಗಿದೆ’ ಎಂದು ತಿಳಿಸಿದರು.
ಮಹಾಸಭಾ ಯುವ ವೇದಿಕೆಯ ಹರ್ಷಧರ ಮಾತನಾಡಿದರು. ಸಂಘಟನೆ ಮುಖಂಡರಾದ ಪುಟ್ಟಬೋರಯ್ಯ, ಶ್ರೀನಿವಾಸ್, ರಾಜಯ್ಯ, ಮಂಜುಳಾ, ನವೀನ್ ಇದ್ದರು.