ತುಮಕೂರು: ಇತರೆ ಇಲಾಖೆಗಳಿಂದ ಕಂದಾಯ ಇಲಾಖೆಗೆ ನಿಯೋಜನೆ ಮೇಲೆ ಬಂದು ಕಾರ್ಯನಿರ್ವಹಿಸುತ್ತಿರುವ ತಹಶೀಲ್ದಾರ್ಗಳನ್ನು ಆ ಹುದ್ದೆಯಿಂದ ತಕ್ಷಣ ಬಿಡುಗಡೆ ಮಾಡುವಂತೆ ರಾಜ್ಯ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು.
2014ರಿಂದ 2020ರ ವರೆಗೆ ತಹಶೀಲ್ದಾರ್ ಗ್ರೇಡ್–2 ಹುದ್ದೆಗಳು ಖಾಲಿಯಿದ್ದರೂ ಸಹ ಮುಂಬಡ್ತಿ ನೀಡದೆ ವಂಚಿತರಾಗಿದ್ದು, ಬಡ್ತಿ ನೀಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಂಘದ ಅಧ್ಯಕ್ಷ ಮಹೇಶ್ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಚಿವಾಲಯ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳನ್ನು ಕಂದಾಯ ಇಲಾಖೆ ತಹಶೀಲ್ದಾರ್ ಹುದ್ದೆಗೆ ನಿಯೋಜನೆ ಮಾಡಬಾರದು ಎಂದು ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರವನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ 634 ತಹಶೀಲ್ದಾರ್ ಹುದ್ದೆಗಳಿದ್ದು, ಮುಂಬಡ್ತಿ ಮೂಲಕ ಶೇ 50ರಷ್ಟು, ನೇರ ನೇಮಕಾತಿ ಮೂಲಕ ಶೇ 50ರಷ್ಟು ಹುದ್ದೆ ಭರ್ತಿ ಮಾಡಲಾಗುತ್ತದೆ. ಬೇರೆ ಇಲಾಖೆಯಿಂದ ತಹಶೀಲ್ದಾರ್ ಹುದ್ದೆಗೆ ನೇಮಕಾತಿ ಮಾಡುವುದರಿಂದ ಕಂದಾಯ ಇಲಾಖೆಯ ನೌಕರರು ಮುಂಬಡ್ತಿಯಿಂದ ವಂಚಿತ ರಾಗುತ್ತಾರೆ ಎಂದು ಮಹೇಶ್ ಆರೋಪಿಸಿದರು.
ಸಾಕಷ್ಟು ವರ್ಷ ಸೇವೆ ಸಲ್ಲಿಸಿದ್ದರೂ ಬಡ್ತಿಯಿಂದ ವಂಚಿತರಾಗಿದ್ದಾರೆ. ಅನ್ಯ ಇಲಾಖೆಯಿಂದ ಬಂದ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕಳುಹಿಸಿ, ತಹಶೀಲ್ದಾರ್ ಹುದ್ದೆಗೆ ಕಂದಾಯ ಇಲಾಖೆ ನೌಕರರಿಗೆ ಮುಂಬಡ್ತಿ ನೀಡಬೇಕು. ಮುಂದಿನ ದಿನಗಳಲ್ಲಿ ಬೇರೆ ಯಾವುದೇ ಇಲಾಖೆಯ ಅಧಿಕಾರಿಗಳನ್ನು ತಹಶೀಲ್ದಾರ್ ಹುದ್ದೆಗೆ ನೇಮಕ ಮಾಡಬಾರದು ಎಂದು ಒತ್ತಾಯಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹರಾಜು, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಅಜಯ್, ಎಲ್.ಮಂಜುನಾಥ್, ಜಿ.ಎನ್.ಕೀರ್ತಿ, ಎಸ್.ದೇವರಾಜು, ಆರ್.ಆರ್.ದಿವ್ಯ, ಎನ್.ರಶ್ಮಿ, ಜಿ.ಎಸ್.ಯೋಗೇಶ್ ಇತರರು ಹಾಜರಿದ್ದರು.