ತಿಪಟೂರು: ಬ್ರಿಟಿಷರ ಬಂಧನದಿಂದ ಹೋರಾಟದ ಮೂಲಕ ಮುಕ್ತಿ ಪಡೆದ ರೀತಿಯಲ್ಲಿ ಜನಸಾಮಾನ್ಯರು ಕೊರೊನಾ ವಿರುದ್ಧ ಹೋರಾಡಲು ಸಹಕಾರ ನೀಡುವ ಅಗತ್ಯವಿದೆ ಎಂದು ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ಹೇಳಿದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ನಡೆದ 74ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಹೊರಗಿನಿಂದ ಬಂದ ಬ್ರಿಟಿಷರ ವಿರುದ್ಧ ಹೋರಾಡಿ ಗೆದ್ದಂತೆಯೇ ನಮಗೆ ಎದುರಾಗಿರುವ ಕೊರೊನಾ ವಿರುದ್ಧ ಹೋರಾಡಬೇಕಿದೆ. ಬಾಹ್ಯ ಶತ್ರುಗಳ ವಿರುದ್ಧ ಹೋರಾಡಿ ಗೆಲ್ಲುವಂತೆ ಅಂತರಿಕ ಶತ್ರುಗಳ ವಿರುದ್ಧವೂ ಹೋರಾಡುವ ಅಗತ್ಯವಿದೆ ಎಂದರು.
ಪ್ರತಿಯೊಬ್ಬರು ಮೂಲಭೂತ ಹಕ್ಕುಗಳಿಗೆ ಹೋರಾಟ ಮಾಡುತ್ತಾರೆ. ಆದರೆ ತಮ್ಮ ಕರ್ತವ್ಯಗಳ ಬಗ್ಗೆಯೂ ಅರಿತು ಪಾಲಿಸಬೇಕು. ಕರ್ತವ್ಯಗಳೆಂದರೆ ನಾವು ರೂಪಿಸಿಕೊಂಡಿರುವ ಹಲವು ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳಲ್ಲಿ ಸಹಿಷ್ಣುತೆ ಜಾಗೃತಗೊಳಿಬೇಕು. ಮಕ್ಕಳಿನ ಪ್ರತಿಭೆಯನ್ನು ಮುಕ್ತವಾಗಿ ಅರಳಲಿಕ್ಕೆ ಅವಕಾಶ ಕಲ್ಪಿಸಿ. ಉತ್ತಮ ಪ್ರಜೆಯಾಗಿ ರೂಪಿಸುವುದೇ ನಿಜವಾದ ದೇಶಭಕ್ತಿ ಎಂದರು.
ಶಾಸಕ ಬಿ.ಸಿ. ನಾಗೇಶ್ ಮಾತನಾಡಿ, ‘ಅನೇಕರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಆದರೆ ಹಿಂದೆ ಕೆಲವರು ಮಾಡಿದ ತಪ್ಪುಗಳಿಂದ ದೇಶದ ಎಲ್ಲ ಭಾಗಗಳಿಗೂ ಸ್ವಾತಂತ್ರ್ಯ ದೊರೆತಿರಲಿಲ್ಲ. ಇಂದು ಜಮ್ಮು- ಕಾಶ್ಮೀರ, ಲಡಾಕ್ನಲ್ಲಿ ತ್ರಿವರ್ಣ ಧ್ವಜ ಹಾರಾಡಿದಾಗ ಪೂರ್ಣ ಸ್ವಾತಂತ್ರ್ಯ ಗಳಿಸಿದ ಭಾವನೆ ಮೂಡಿದೆ. ಮೆಕಾಲೆ ಶಿಕ್ಷಣ ಪದ್ಧತಿಯನ್ನು ಬಿಟ್ಟು ನೂತನ ಶಿಕ್ಷಣ ನೀತಿ ಜಾರಿಗೆ ಮುಂದಾಗಿದ್ದು, ಮೌಲ್ಯಾಧಾರಿತ ಶಿಕ್ಷಣ ದೊರೆಯಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ನಾರಾಯಣ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಎಸ್. ಶಿವಸ್ವಾಮಿ, ಎಪಿಎಂಸಿ ಅಧ್ಯಕ್ಷ ಬಜಗೂರು ಮಂಜುನಾಥ್, ತಹಶೀಲ್ದಾರ್ ಚಂದ್ರಶೇಖರ್, ಡಿವೈಎಸ್ಪಿ ಚಂದನ್ ಕುಮಾರ್, ನಗರಸಭೆ ಪೌರಾಯುಕ್ತ ಉಮಾಕಾಂತ್, ಆರೋಗ್ಯ ಇಲಾಖೆಯ ಟಿಎಚ್ಒ ಡಾ. ರವಿಕುಮಾರ್ ಭಾಗವಹಿಸಿದ್ದರು.