ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯೋಗಕ್ಕೆ ಮುಖ್ಯ ಕಾರ್ಯದರ್ಶಿ ಪತ್ರ ಬರೆಯಲಿ

ಬರಗಾಲ; ಪರಿಹಾರ ಕಾಮಗಾರಿ, ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲೆಯ ಬಿಜೆಪಿ ಶಾಸಕರ ಒತ್ತಾಯ
Last Updated 25 ಏಪ್ರಿಲ್ 2019, 20:30 IST
ಅಕ್ಷರ ಗಾತ್ರ

ತುಮಕೂರು: ‘ಲೋಕಸಭಾ ಚುನಾವಣೆ ರಾಜ್ಯದಲ್ಲಿ ಮುಗಿದಿದೆ. ಬರ ಪರಿಹಾರ ಕಾಮಗಾರಿ ಕೈಗೊಳ್ಳಲು, ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ನೀತಿ ಸಂಹಿತೆ ಅಡ್ಡಿಯಾಗಿದೆ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಚುನಾವಣಾ ಆಯೋಗಕ್ಕೆ ಪತ್ರ ಬರೆದು ನೀತಿ ಸಂಹಿತೆ ಸಡಿಸಲು ಕೋರಬೇಕು’ ಎಂದು ಜಿಲ್ಲೆಯ ಬಿಜೆಪಿ ಶಾಸಕರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಮಸಾಲಾ ಜಯರಾಮ್ ಹಾಗೂ ಜ್ಯೋತಿಗಣೇಶ್, 'ರಾಜ್ಯದಲ್ಲಿ 126 ತಾಲ್ಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಚುನಾವಣೆ ನೀತಿ ಸಂಹಿತೆ ಕಾರಣ ಹೇಳಿಕೊಂಡು ಎರಡು ತಿಂಗಳು ಏನೂ ಕೆಲಸಗಳು ಆಗಿಲ್ಲ. ಚುನಾವಣೆ ಮುಗಿದ ಬಳಿಕವೂ ಅದೇ ಪರಿಸ್ಥಿತಿ ಆದರೆ ಹೇಗೆ’ ಎಂದು ಪ್ರಶ್ನಿಸಿದರು.

‘ನಮ್ಮ ಕ್ಷೇತ್ರದಲ್ಲಿ ನೀರಿಗಾಗಿ, ದನಕರುಗಳಿಗೆ ಮೇವಿಗಾಗಿ, ಬರಪರಿಹಾರ ಕಾಮಗಾರಿಗೆ ಜನ ಒತ್ತಾಯಿಸುತ್ತಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಹಿಡಿದು ಜಿಲ್ಲಾಧಿಕಾರಿವರೆಗಿನ ಯಾವುದೇ ಅಧಿಕಾರಿಗಳನ್ನು ಸಂಪರ್ಕಿಸಿ ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಯಾರೂ ನಮ್ಮ ಕಷ್ಟ ಕೇಳುತ್ತಿಲ್ಲ’ ಎಂದು ಹೇಳಿದರು.

‘ಸಂಬಂಧಪಟ್ಟ ಸಚಿವರು, ಮುಖ್ಯಮಂತ್ರಿ ಕೂಡಾ ಅದನ್ನೇ ಹೇಳ್ತಾರೆ. ಹೀಗಾಗಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೇ ಇದಕ್ಕೆ ಪರಿಹಾರ ಹುಡುಕಬೇಕು. ಚುನಾವಣಾ ಆಯೋಗಕ್ಕೆ ಪತ್ರ ಬರೆದು ರಾಜ್ಯದ ಬರಗಾಲ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟು ನೀತಿ ಸಂಹಿತೆ ಸಡಿಲಗೊಳಿಸಲು ಮನವಿ ಮಾಡಬೇಕು’ ಎಂದರು.

‘ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಕೊರೆಸಲು ಪ್ಯಾಕೇಜ್ ಮಾದರಿಯಲ್ಲಿ ಅಲ್ಪಾವಧಿ ಟೆಂಡರ್ ಕರೆಯಲು ಅವಕಾಶ ಮಾಡಿಕೊಡುವುದಾಗಿ ಮುಖ್ಯಕಾರ್ಯದರ್ಶಿ ಹೇಳಿದ್ದಾರೆ. ಆದರೆ, ವಾಸ್ತವಿಕವಾಗಿ ಈ ಪ್ಯಾಕೇಜ್ ಪದ್ಧತಿಯೇ ಸರಿ ಇಲ್ಲ. ಟೆಂಡರ್‌ನಲ್ಲಿ ತನಗೆ ನಿಗದಿಪಡಿಸಿದಷ್ಟು ಕೊಳವೆ ಬಾವಿ ಕೊರೆಯುತ್ತಾರೆ. ಬಿಲ್ ಪಡೆಯುತ್ತಾರೆ ಹೋಗುತ್ತಾರೆ. ನೀರು ಬರದೇ ಇದ್ದರೂ ಅದು ಅವರಿಗೆ ಸಂಬಂಧವಿಲ್ಲ. ಲೆಕ್ಕಕ್ಕೆ ಕೊಳವೆ ಬಾವಿ ಕೊರೆದಿರುತ್ತಾರೆ. ಹೀಗಾದರೆ, ಜನರಿಗೆ ನೀರು ಕೊಡಲು ಸಾಧ್ಯವಾಗುವುದಿಲ್ಲ ಎಂದರು.

‘ಶಾಸಕರ ನೇತೃತ್ವದ ಕಾರ್ಯಪಡೆ (ಟಾಸ್ಕ್ ಪೋರ್ಸ್) ಹಿಂದಿನಿಂದ ನಡೆಸಿಕೊಂಡು ಬಂದ ತುಂಡು ಕಾಮಗಾರಿಗೆ ಅವಕಾಶ ಕೊಡಬೇಕು. ಯಾಕೆಂದರೆ ಒಂದು ಕಡೆ ನೀರು ಬೀಳದೇ ಇದ್ದರೆ ಇನ್ನೊಂದೆರಡು ಕಡೆ ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆ ಪರಿಹರಿಸಲು ಅವಕಾಶ ಇರುತ್ತದೆ’ ಎಂದು ವಿವರಿಸಿದರು.

ತಿಪಟೂರು ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ‘ಶಾಸಕರಾಗಿ ನಾವುಗಳು ಭೇಟಿ ಮಾಡಲೂ ಕೂಡಾ ಆಗದ ಸ್ಥಿತಿ ಇದೆ. ನೀತಿ ಸಂಹಿತೆ ಎಂಬುದು ನಮ್ಮ ಪಾಲಿಗೆ ತುರ್ತು ಪರಿಸ್ಥಿತಿಗಿಂತ (ಎಮರ್ಜೆನ್ಸಿ) ಕಡೆಯಾಗಿದೆ. ಅಧಿಕಾರಿಗಳನ್ನು ಭೇಟಿ ಮಾಡುವಂತಿಲ್ಲ. ಮಾಹಿತಿ ಪಡೆಯುವಂತಿಲ್ಲ. ಕೂಡಲೇ ನೀತಿ ಸಂಹಿತೆ ಸಡಿಲಗೊಳಿಸಬೇಕು. ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಬೇಕು’ ಎಂದು ಹೇಳಿದರು.

‘ಹೇಮಾವತಿ ಜಲಾಶಯದಲ್ಲಿ ಇನ್ನೂ ಸಾಕಷ್ಟು ನೀರು ಇದೆ. ಜಿಲ್ಲೆಗೆ 1 ಟಿ.ಎಂ.ಸಿ ನೀರು ಪಡೆಯಲು ಅವಕಾಶವಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪ್ರಯತ್ನ ಮಾಡಬೇಕು’ ಎಂದರು.

ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಮಾತನಾಡಿ, ‘ನಮ್ಮ ತುರುವೇಕೆರೆ ಕ್ಷೇತ್ರದಲ್ಲಿ 20 ಕೊಳವೆ ಬಾವಿ ಕೊರೆಸಿದರೆ 10ರಲ್ಲಿ ಮಾತ್ರ ನೀರು ಬಂದಿರುತ್ತದೆ. ಮಿಕ್ಕಿದ್ದರಲ್ಲಿ ನೀರೇ ಸಿಕ್ಕಿಲ್ಲ. ಹಾಗಾದರೆ ನೀರು ಹೇಗೆ ಕೊಡುವುದು’ ಎಂದು ಪ್ರಶ್ನಿಸಿದರು.

‘ಅಂತರ್ಜಲ ಕಡಿಮೆ ಆಗಿ ಕೊಳವೆ ಬಾವಿ ಬತ್ತಿವೆ. ಈಚೆಗೆ ಸುರಿದ ಮಳೆ ಮತ್ತು ಗಾಳಿಗೆ 30 ಮನೆಗಳಿಗೆ ನಷ್ಟವಾಗಿದೆ. ವಿದ್ಯುತ್ ಸಂಪರ್ಕವನ್ನೇ ಕಳೆದುಕೊಂಡಿದೆ. ವಿದ್ಯುತ್ ಪರಿವರ್ತಕಗಳಿಲ್ಲ. ಸರ್ಕಾರ ಯೋಜನೆಗಳಡಿ ಅನುದಾನ ದೊರಕಿಸಿದರೂ ನೀತಿ ಸಂಹಿತೆ ಎಂಬ ದೊಡ್ಡ ನೆಪ ಮಾಡಿಕೊಂಡು ಆಡಳಿತ ಯಂತ್ರ ಏನೂ ಕೆಲಸ ಮಾಡುತ್ತಿಲ್ಲ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT