ಪಾವಗಡ: ತಾಲ್ಲೂಕಿನ ಟಿ.ಎನ್.ಪೇಟೆ ಬಳಿ ಭಾನುವಾರ ರಾತ್ರಿ ಪ್ರಯಾಣಿಕರನ್ನು ಇಳಿಸುವ ಸಲುವಾಗಿ ನಿಲ್ಲಿಸಿದ್ದ ಆಟೊಗೆ ಕಾರ್ ಡಿಕ್ಕಿ ಹೊಡೆದಿದೆ. ಆಟೊದಲ್ಲಿದ್ದ ಬಾಲಕ ಮೃತಪಟ್ಟಿದ್ದಾನೆ.
ಚಳ್ಳಕೆರೆ ತಾಲ್ಲೂಕು ಗೌರಿಪುರದ ವರ್ಷಿತ್ ರೆಡ್ಡಿ (13) ಮೃತರು. ಗೌರಿಪುರದ ಸುಧಾ (51), ಜಶ್ವಂತ್ (15), ನಾರಾಯಣಮ್ಮ (50), ನಾರಾಯಣಪ್ಪ (50), ತಾಲ್ಲೂಕಿನ ಜೆ. ಅಚ್ಚಮ್ಮನಹಳ್ಳಿ ಭರತ್ (16) ಎಂಬುವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಆಂಧ್ರದ ಅನಂತಪುರ ಜಿಲ್ಲೆಯ ರೊದ್ದಂ ಮಂಡಲಂ ಶೇಷಾಪುರಕ್ಕೆ ಸಂಕ್ರಾಂತಿ ಹಬ್ಬಕ್ಕಾಗಿ ಹೋಗಿದ್ದು, ಹಬ್ಬ ಮುಗಿಸಿಕೊಂಡು ರೊದ್ದಂ ನಿಂದ ಪಟ್ಟಣಕ್ಕೆ ಆಟೊದಲ್ಲಿ ಬರುವಾಗ, ಟಿ.ಎನ್.ಪೇಟೆ ಬಳಿ ನಿಲ್ಲಿಸಿದ್ದ ಆಟೊಗೆ ವೇಗವಾಗಿ ಬಂದ ಇನ್ನೋವಾ ಕಾರ್ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ವರ್ಷಿತ್ ರೆಡ್ಡಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅಪಘಾತ ನಡೆದ ಕೂಡಲೆ ಕಾರ್ ಚಾಲಕ ಸ್ಥಳದಲ್ಲಿ ಕಾರ್ ಬಿಟ್ಟು ಪರಾರಿಯಾಗಿದ್ದಾರೆ. ಪಟ್ಟಣ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.