ಹಾಗಲವಾಡಿ: ಇಲ್ಲಿನ ಮಠದ ಕೆರೆ, ಕರುಬರಹಳ್ಳಿ ಕೆರೆ, ಶೇಷೇನಹಳ್ಳಿ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಚಾಲನೆ ನೀಡದಿದ್ದರೆ ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಮುಖಂಡ ಶಿವಲಿಂಗಯ್ಯ ಎಚ್ಚರಿಸಿದರು.
ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಮಪಂಚಾಯಿತಿ ಮತದಾರರು ಭಾನುವಾರ ನಡೆಸಿದ ಮುಷ್ಕರದಲ್ಲಿ ಮಾತನಾಡಿದರು.
ಹದಿನೆಂಟು ವರ್ಷಗಳಿಂದ ನೀರಿನ ಹೋರಾಟ ನಡೆಯುತ್ತಲೇ ಇದೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ನೀರಿನ ಬವಣೆ ತೀರಿಸುವ ಮನಸ್ಸು ಮಾಡಿಲ್ಲ. ಈ ಕೆರೆಗಳಿಗೆ ನೀರುಹರಿಸಲು 2019ರ ಜುಲೈನಲ್ಲೇ ₹ 25.65 ಕೋಟಿ ಮಂಜೂರಾಗಿದ್ದರೂ, ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸಲು ಮೀನಾ ಮೇಷ ಎಣಿಸುತ್ತಿದ್ದಾರೆ ಎಂದರು.
ಎರಡೂ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 36 ಸದಸ್ಯರಿದ್ದಾರೆ. ಆಕಾಂಕ್ಷಿಗಳು ತಮ್ಮ ಬೇಡಿಕೆ ಈಡೇರುವ ವರಗೆ ಉಮೇದುವಾರಿಕೆ ಸಲ್ಲಿಸುವುದಿಲ್ಲ ಎಂದರು.
ತಹಸೀಲ್ದಾರ್ ಪ್ರದೀಪ್ ಕುಮಾರ್ ಮತದಾರರ ಮನವೊಲಿಸಿ ಮತದಾನ ಬಹಿಷ್ಕರಿಸಿದಂತೆ ಮನವಿ ಮಾಡಿದರು.
ನಲ್ಲೂರು ಶಿವಣ್ಣ, ಸೋಮಣ್ಣ, ರಮೇಶ್, ಬಾಬು, ನಾಗರಾಜು ಹಾಗೂ ಎರಡೂ ಗ್ರಾಮಪಂಚಾಯಿತಿ ಮತದಾರರು ಭಾಗವಹಿಸಿದ್ದರು.