ತುಮಕೂರು: ತಾಲ್ಲೂಕಿನ ಮಲ್ಲಸಂದ್ರದ ವಿಶ್ವಭಾರತಿ ವಸತಿ ಶಾಲೆಯ ಮಕ್ಕಳ ಮೇಲೆ ಅದೇ ಶಾಲೆಯ ಕಾರ್ಯದರ್ಶಿ ಎನ್.ಮೂರ್ತಿ ಪುತ್ರ ಭರತ್ ಹಲ್ಲೆ ನಡೆಸಿದ್ದಾರೆ.
ಹಾಸ್ಟೆಲ್ನಲ್ಲಿ ಇರುವ ಮಕ್ಕಳು ರಾತ್ರಿ ವೇಳೆ ಬೇಗ ಮಲಗಿದ್ದರು ಎಂಬ ಕಾರಣಕ್ಕೆ ಹಲ್ಲೆ ಮಾಡಲಾಗಿದೆ. ರಾತ್ರಿ 10 ಗಂಟೆ ಸಮಯದಲ್ಲಿ ಸುಮಾರು 40 ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಬೆಲ್ಟ್, ದೊಣ್ಣೆಯಿಂದ ಹೊಡೆದಿದ್ದಾರೆ. ದಮ್ಮಯ್ಯ ಮತ್ತೊಮ್ಮೆ ಹೀಗೆ ಮಾಡುವುದಿಲ್ಲ ಎಂದು ಬೇಡಿಕೊಂಡು ಕಾಲಿಗೆ ಬಿದ್ದರೂ ಬಿಟ್ಟಿಲ್ಲ. ಮರ್ಮಾಂಗದ ಮೇಲೂ ಹೊಡೆದಿದ್ದಾರೆ. ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಿದ್ದು, ಗಾಯಗೊಂಡ ಮಕ್ಕಳಿಗೆ ಆಡಳಿತ ಮಂಡಳಿಯವರು ಚಿಕಿತ್ಸೆಯನ್ನೂ ಕೊಡಿಸಿಲ್ಲ.
ಕಳೆದ ಸೋಮವಾರ ಘಟನೆ ನಡೆದಿದ್ದು, ನಾಲ್ಕು ದಿನಗಳ ನಂತರ ಪೋಷಕರಿಗೆ ಗೊತ್ತಾಗಿದೆ. ಮಕ್ಕಳು ಕರೆ ಮಾಡಿ ಹಲ್ಲೆಯಿಂದ ಗಾಯಗೊಂಡಿರುವ ವಿಚಾರ ತಿಳಿಸಿದ ನಂತರ ಬೆಳಕಿಗೆ ಬಂದಿದೆ. ಗುರುವಾರ ಶಾಲೆಗೆ ಬಂದ ಪೋಷಕರು ಮಕ್ಕಳ ಮೇಲಿನ ಹಲ್ಲೆ ನೋಡಿ ಆತಂಕಗೊಂಡಿದ್ದಾರೆ.
ಪ್ರತಿ ನಿತ್ಯ ಕುಡಿದು ಬಂದು ಮಕ್ಕಳ ಮೇಲೆ ಭರತ್ ಹಲ್ಲೆ ನಡೆಸಿದ್ದು, ವೈಯಕ್ತಿಕ ಕೆಲಸ ಮಾಡಿಸಿಕೊಳ್ಳಲು ಬಳಸಿಕೊಂಡಿದ್ದಾರೆ. ಹೇಳಿದ ಕೆಲಸ ಮಾಡದಿದ್ದರೆ ಹೊಡೆಯುತ್ತಿದ್ದರು. ಕಾಯಿ ಕೀಳಿಸುವುದು, ಕಾರು ತೊಳೆಸುವುದು, ಮನೆ ಕೆಲಸ, ತೋಟದಲ್ಲಿ ಕೆಲಸ ಮಾಡಿಸುತ್ತಿದ್ದರು ಎಂದು ಪೋಷರು ಆರೋಪಿಸಿದ್ದಾರೆ.
ಈ ಸಂಬಂಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಮಪತ್ತೆಯಾಗಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.