ತುಮಕೂರು: ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ (ಎಬಿ–ಎಆರ್ಕೆ) ಯೋಜನೆಯಡಿ ಬಡ, ಮಧ್ಯಮ ವರ್ಗದ ಜನರಿಗೆ ಉಚಿತವಾಗಿ ಕೋವಿಡ್ ಚಿಕಿತ್ಸೆ ನೀಡುವಂತೆ ಕಾಂಗ್ರೆಸ್ ಮುಖಂಡರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಅವರನ್ನು ಒತ್ತಾಯಿಸಿದರು.
ಸೋಮವಾರ ಭೇಟಿಯಾದ ನಿಯೋಗದ ಮುಖಂಡರು, ‘ಸಕಾಲಕ್ಕೆ ಕೋವಿಡ್ ಲಸಿಕೆ ನೀಡಬೇಕು. 3ನೇ ಅಲೆಯಲ್ಲಿ ಮಕ್ಕಳ ರಕ್ಷಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಆಮ್ಲಜನಕ ಕೊರತೆ ನೀಗಿಸಬೇಕು. ರೆಮ್ಡಿಸಿವಿರ್ ಲಸಿಕೆ, ಅಗತ್ಯ ಔಷಧಿ ಸಿಗುವಂತೆ ಮಾಡಬೇಕು. ಕಪ್ಪು ಶಿಲೀಂಧ್ರಕ್ಕೆ ತುತ್ತಾದವರಿಗೆ ಸೂಕ್ತ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.
ಡಿಎಚ್ಒ ಡಾ.ನಾಗೇಂದ್ರಪ್ಪ, ‘ಖಾಸಗಿ ಆಸ್ಪತ್ರೆಗಳಲ್ಲಿ 1,250 ಆಮ್ಲಜನಕ ಸಹಿತ ಹಾಸಿಗೆಗಳು ಲಭ್ಯ ಇವೆ. ಅದರಲ್ಲಿ 650 ಹಾಸಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಗೆ ನೀಡಿರುವ 87 ವೆಂಟಿಲೇಟರ್ಗಳಲ್ಲಿ 74 ಬಳಕೆಯಾಗುತ್ತಿವೆ’ ಎಂದು ವಿವರಿಸಿದರು.