ಪಾವಗಡ: ಕೊರೊನಾ ಸೋಂಕಿತರು ಪತ್ತೆಯಾದ ಭೂಪೂರು ತಾಂಡಾ, ಕಡಮಲಕುಂಟೆ, ಎರಪಾಳ್ಯ ಗ್ರಾಮಗಳನ್ನು ಸೀಲ್ಡೌನ್ ಮಾಡಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.
ಜೂ.27 ರಂದು ಕೊರೊನಾ ದೃಢಪಟ್ಟ ವ್ಯಕ್ತಿಯ ಪತ್ನಿ ಪಟ್ಟಣದ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ವಿಚಾರ ತಿಳಿದ ವಕೀಲರ ಸಂಘ ತುರ್ತು ಸಭೆ ನಡೆಸಿ 14 ದಿನಗಳ ಕಲಾಪ ಸ್ಥಗಿತಗೊಳಿಸುವ ತೀರ್ಮಾನ ತೆಗೆದುಕೊಂಡಿದೆ.
ಪಟ್ಟಣ ಸೇರಿದಂತೆ ತಾಲ್ಲೂಕಿನ ವರ್ತಕರು ವ್ಯಾಪಾರಕ್ಕಾಗಿ ಬೆಂಗಳೂರಿಗೆ ಹೋಗಿ ಬರುತ್ತಿದ್ದಾರೆ. ಆಂಧ್ರದ ಜೊತೆಗೂ ನಂಟಿದೆ. ಹೀಗಾಗಿ ವರ್ತಕರ ಮನವೊಲಿಸಿ ಹಂತ ಹಂತವಾಗಿ ವರ್ತಕರಿಗೆ ಕೊರೊನಾ ಪರೀಕ್ಷೆ ನಡೆಸುವ ಅಗತ್ಯವಿದೆ ಎಂದು ಜನರು ಚರ್ಚಿಸುತ್ತಿದ್ದಾರೆ.
ಎರಡು ದಿನಗಳಲ್ಲಿ 10 ಮಂದಿಯಲ್ಲಿ ಸೋಂಕು ದೃಢಪಟ್ಟರೂ ಪಟ್ಟಣದಲ್ಲಿ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ಜನರು ನಿರ್ಲಕ್ಷ್ಯ ವಹಿಸಿದ್ದಾರೆ. ಇದು ರಸ್ತೆಗಳಲ್ಲಿ ಎದ್ದು ಕಾಣುತ್ತದೆ.