ಶಿರಾ: ನಗರದ ದೊಡ್ಡ ಕೆರೆಯಲ್ಲಿ ಈಜಾಡಲು ಹೋಗಿದ್ದ ಖೈಬರ್ (28) ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಘಟಪ್ರಭಾ ಗ್ರಾಮದ ನಿವಾಸಿ ಖೈಬರ್, ಶಿರಾ ನಗರದ ಬೇಗಂ ಮೊಹಲ್ಲಾದ ನಿವಾಸಿ ಮಹಮದ್ ಆಲಿ ಅವರ ಪುತ್ರಿ ಕನೀಸ್ ಫಾತೀಮಾ ಅವರನ್ನು ವಿವಾಹವಾಗಿದ್ದರು.
ಸೋಮವಾರ ಮಾವನ ಮನೆಗೆ ಬಂದಿದ್ದ ಖೈಬರ್ ಮನೆಯಲ್ಲಿ ಹೊರಗೆ ಹೋಗಿ ಬರುವುದಾಗಿ ಹೇಳಿ ದೊಡ್ಡ ಕೆರೆಯಲ್ಲಿ ಈಜಾಡಲು ಹೋಗಿದ್ದರು. ರಾತ್ರಿ ಮನೆಗೆ ಬರದ ಕಾರಣ ಮನೆಯವರಿಗೆ ಆತಂಕ ಮೂಡಿತ್ತು. ಮಂಗಳವಾರ ಬೆಳಿಗ್ಗೆ ದೊಡ್ಡ ಕೆರೆಯಲ್ಲಿ ಮೃತ ದೇಹ ಪತ್ತೆಯಾಗಿದೆ.
ಶಿರಾ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.