ತುಮಕೂರು: ನಗರದ ಉದ್ಯಮಿಗಳಿಗೆ ಜೀವ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ನಾಲ್ಕು ಮಂದಿಯನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.
ಸದಾಶಿವನಗರದ ಆಲಿ ಹುಸೇನ್ (40), ಶಾನ್ವಾಜ್ಪಾಷ (40), ಪಿ.ಎಚ್.ಕಾಲೊನಿ ಸೈಯದ್ಶವರ್ (34), ಬೆಂಗಳೂರು ಯಶವಂತಪುರದ ಮೆಹಬೂಬ್ಖಾನ್ (40) ಬಂಧಿತರು. ಮತ್ತೊಬ್ಬ ಆರೋಪಿ ಸ್ಟೈಲ್ ಇಮ್ರಾನ್ ತಲೆಮರೆಸಿಕೊಂಡಿದ್ದಾರೆ.
ಮಂಡಿಪೇಟೆ ಇಬ್ಬರು ಆಯಿಲ್ ಉದ್ಯಮಿಗಳು ಹಾಗೂ ಮತ್ತೊಬ್ಬ ಉದ್ಯಮಿಗೆ ಅಪರಿಚಿತ ವ್ಯಕ್ತಿಯೊಬ್ಬರು ವಾಟ್ಸ್ಆ್ಯಪ್ ಕರೆ ಮತ್ತು ಸಂದೇಶದ ಮೂಲಕ ಬೆದರಿಕೆ ಹಾಕಿದ್ದಾರೆ. ‘ಒಂದು ವಾರದ ಹಿಂದೆ ನಿಮ್ಮ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದನ್ನು ಮರೆತಿದ್ದೀರಾ. ಅದು ಕೇವಲ ಸ್ಯಾಂಪಲ್. ನಮ್ಮ ಬೇಡಿಕೆ ಈಡೇರಿಸಿ’ ಎಂದು ಕರೆ ಮಾಡಿ ಧಮ್ಕಿಹಾಕಿ ₹ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಇದೇ ರೀತಿ ಮಂಡೀಪೇಟೆ ಮತ್ತೊಬ್ಬ ಉದ್ಯಮಿ ವಾಲ್ಮೀಕಿ ನಗರದ ತನ್ನ ಮನೆಯ ಬಳಿ ಕಾರಿನಲ್ಲಿ ಬರುತ್ತಿದ್ದಾಗ ರಾತ್ರಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದರು. ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗೆ ನಗರ ವೃತ್ತ ನಿರೀಕ್ಷಕ ಬಿ.ನವೀನ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 6 ಮೊಬೈಲ್ಗಳು, ಸಿಮ್ಗಳು, 1 ಆಟೊ, 1 ಬೈಕ್, 1 ಮಚ್ಚು, ₹ 1,000 ಹಣ ವಶಪಡಿಸಿಕೊಳ್ಳಲಾಗಿದೆ.