ತುಮಕೂರು: ಕಳೆದ ವರ್ಷ ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ್ದು, ರೈತರಿಗೆ ಬರ ಪರಿಹಾರ ನೀಡಲಾಗುತ್ತಿದೆ.
ಜಿಲ್ಲೆಯ ಒಟ್ಟು 1,98,387 ರೈತರಿಗೆ ₹35.66 ಕೋಟಿ ಬೆಳೆ ನಷ್ಟ ಪರಿಹಾರ ಒದಗಿಸಲು ಜಿಲ್ಲಾ ಆಡಳಿತದಿಂದ ಈಗಾಗಲೇ ಅನುಮೋದನೆ ನೀಡಲಾಗಿದೆ. ಇದುವರೆಗೆ 1,26,556 ರೈತರ ಖಾತೆಗಳಿಗೆ ₹22.74 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 14,168 ರೈತರು, ಗುಬ್ಬಿಯ 8,384, ಕೊರಟಗೆರೆ-11,957, ಕುಣಿಗಲ್-19,396, ಮಧುಗಿರಿ-14,582, ಪಾವಗಡ-4,922, ಶಿರಾ-14,977, ತಿಪಟೂರು-14,464, ತುಮಕೂರು-11,402 ಹಾಗೂ ತುರುವೇಕೆರೆ ತಾಲ್ಲೂಕಿನ 12,304 ರೈತರ ಖಾತೆಗಳಿಗೆ ಈಗಾಗಲೇ ಹಣ ಜಮಾ ಆಗಿದೆ ಎಂದು ಹೇಳಿದ್ದಾರೆ.
‘ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಜೋಡಣೆ, ಇತರೆ ತಾಂತ್ರಿಕ ದೋಷಗಳಿಂದ 3,389 ರೈತರಿಗೆ ಬೆಳೆ ನಷ್ಟ ಪರಿಹಾರ ಪಾವತಿಯಾಗಿಲ್ಲ. ಜಿಲ್ಲೆಯ ರೈತರು ತಮ್ಮ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಜೋಡಣೆಯಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ತಾಲ್ಲೂಕಿನ ಕೃಷಿ ಇಲಾಖೆಯ ಕಚೇರಿ, ರೈತರ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು’ ಎಂದು ತಿಳಿಸಿದ್ದಾರೆ.