ತುಮಕೂರು: ತಾಲ್ಲೂಕಿನ ಸತ್ಯಮಂಗಲದಲ್ಲಿ ಎಂಎಸ್ಐಎಲ್ನಿಂದ ಮದ್ಯ ಮಾರಾಟ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ತಾ.ಪಂ.ಅಧ್ಯಕ್ಷ ಗಂಗಾಂಜನೇಯ ನೇತೃತ್ವದಲ್ಲಿ ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಿದ್ದೇಶ್ವರ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಮಾರುತಿ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಮದ್ಯ ಮಾರಾಟದ ವಿರುದ್ಧ ಪ್ರತಿಭಟಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮದ್ಯ ಮಾರಾಟ ಮಾಡುವ ಸ್ಥಳದ ಪಕ್ಕದಲ್ಲಿ ಡೇರಿ ಮತ್ತು ಗಣಪತಿ ದೇವಸ್ಥಾನ ಇದೆ. ಸುತ್ತಮುತ್ತಲೂ ಕೃಷಿ ಭೂಮಿ ಇದೆ. ರೈತರು ವ್ಯವಸಾಯವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಮಹಿಳೆಯರು ಹಸುಗಳನ್ನು ಸಾಕಿ ಡೇರಿಗೆ ಹಾಲು ಹಾಕಿ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಮದ್ಯ ಮಾರಾಟದಿಂದ ಸತ್ಯಮಂಗಲ ಮತ್ತು ವಡ್ಡರಹಳ್ಳಿ ಗ್ರಾಮದ ಜನರಿಗೆ ತೊಂದರೆ ಆಗುತ್ತಿದೆ ಎಂದು ದೂರಿದರು.