ಕುಣಿಗಲ್: ಕೋವಿಡ್ ಎರಡನೇ ಅಲೆ ತೀವ್ರವಾಗಿದ್ದು, ಸಾರ್ವಜನಿಕರು ಪರದಾಡುತ್ತಿದ್ದಾರೆ. ಸಾರ್ವಜನಿಕ ಆಸ್ಪತ್ರೆಯ ತೀವ್ರ ನಿಗಾ ಘಟಕ ಸ್ಥಗಿತಗೊಂಡಿದೆ. ವೈದ್ಯಾಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನಹರಿಸುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.
ತಾಲ್ಲೂಕಿನಲ್ಲಿ 2017ರಲ್ಲಿ ಡೆಂಗಿ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾದಾಗ ಅಂದಿನ ಶಾಸಕ ಡಿ.ನಾಗರಾಜಯ್ಯನವರ ಸಲಹೆ ಮೇರೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ ಪ್ರಾರಂಭಿಸಲಾಗಿತ್ತು. ಪ್ರಾರಂಭದ ದಿನಗಳಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದ ಘಟಕ ನಂತರದ ದಿನಗಳಲ್ಲಿ ಸ್ಥಗಿತಗೊಂಡಿದೆ.
ಕಳೆದ ವರ್ಷದಿಂದ ತಾಲ್ಲೂಕಿನಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ನೂರಾರು ಮಂದಿ ಪರದಾಡುತ್ತಿದ್ದಾರೆ. ಸೋಂಕಿತರನ್ನು ಕೋವಿಡ್ ವಿಶೇಷ ವಾರ್ಡ್ನಲ್ಲಿ ಮತ್ತು ವಸತಿಶಾಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೂ, ಸಾರ್ವಜನಿಕ ಆಸ್ಪತ್ರೆಯಲ್ಲಿರುವ ತೀವ್ರ ನಿಗಾ ಘಟಕವನ್ನು ಬಳಸಿಕೊಳ್ಳಲು ವೈದ್ಯರು ವಿಫಲರಾಗಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಐದು ಬೆಡ್ ಮತ್ತು ಮೂರು ವೆಂಟಿಲೇಟರ್ ಗಳಿದ್ದರೂ, ವೈದ್ಯರ ನಿರ್ಲಕ್ಷದಿಂದ ಬಳಕೆಯಾಗದ ಕಾರಣ ರೋಗಿಗಳು ಪರದಾಡುವ ಸ್ಥಿತಿ ಮುಂದುವರೆದಿದೆ.
ಶಾಸಕರು ಕಳೆದ ಐದು ದಿನಗಳಿಂದ ನಿರಂತರವಾಗಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆಗಾಗಿ ದಾಖ ಲಾಗಿರುವ ಸೋಂಕಿತರೊಂದಿಗೆ ಚರ್ಚಿಸಿ ಸೂಕ್ತ ಮಾರ್ಗ ದರ್ಶನ ನೀಡಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಆದರೆ ಸ್ಥಗಿತ ಗೊಂಡಿರುವ ತೀವ್ರ ನಿಗಾ ಘಟಕದ ಬಗ್ಗೆ ಗಮನಹರಿಸುತ್ತಿಲ್ಲ. ಘಟಕದಲ್ಲಿ ವೆಂಟಿಲೇಟರ್ ಸೌಲಭ್ಯವಿರುವುದರಿಂದ ಗಂಭೀರಗೊಂಡ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡುವ ಮೂಲಕ ಜೀವ ಉಳಿಸುವ ಕಾರ್ಯಕ್ಕೆ ಮತ್ತು ತೀವ್ರ ನಿಗಾ ಘಟಕದ ಮರುಚಾಲನೆಗೆ ಗಮನಹರಿಸಲು ವೆಂಕಟೇಶ್, ರಂಗಸ್ವಾಮಿ ಮನವಿ ಮಾಡಿದ್ದಾರೆ.