ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರು ದಾರಿ ತಪ್ಪಿದ್ದಾರೆಯೇ: ಎಚ್‌ಡಿಕೆ ಹೇಳಿಕೆಗೆ ಡಿಕೆಶಿ ಪ್ರಶ್ನೆ

Published 14 ಏಪ್ರಿಲ್ 2024, 14:30 IST
Last Updated 14 ಏಪ್ರಿಲ್ 2024, 14:30 IST
ಅಕ್ಷರ ಗಾತ್ರ

ತುಮಕೂರು: ‘ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಭಾಗದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ’ ಎಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ತಿಪಟೂರು ತಾಲ್ಲೂಕಿನ ಕೆ.ಬಿ.ಕ್ರಾಸ್ ಬಳಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಂಡು ಮಹಿಳೆಯರು ಬಸ್‌ನಲ್ಲಿ ಪ್ರಯಾಣ ಮಾಡಿದರೆ ದಾರಿ ತಪ್ಪುತ್ತಾರೆ ಎಂದು ಹೇಳುತ್ತಿದ್ದೀರಿ. ಹಾಗಾದರೆ ಎಲ್ಲಿ ದಾರಿ ತಪ್ಪಿದ್ದಾರೆ ತೋರಿಸಿ? ನೀವು ಒಬ್ಬ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದೀರಿ ಎಂಬುದನ್ನು ಮರೆಯಬೇಡಿ’ ಎಂದು ಕುಟುಕಿದರು.

ಇಂದಿರಾ ಗಾಂಧಿ ಹತ್ಯೆಯಾದಾಗ ಮನಸ್ಸಿಗೆ ತೀವ್ರ ನೋವಾಗಿತ್ತು. ಅದು ಬಿಟ್ಟರೆ ಈಗ ಕುಮಾರಸ್ವಾಮಿ ಮಾತು ಕೇಳಿ ನೋವಾಗಿದೆ. ಒಬ್ಬ ಮಾಜಿ ಪ್ರಧಾನಿ ಪುತ್ರ, ಮುಖ್ಯಮಂತ್ರಿ ಆಗಿದ್ದವರು ನಮ್ಮ ತಾಯಂದಿರ ಬಗ್ಗೆ ಇಂತಹ ಮಾತುಗಳನ್ನಾಡಬಹುದೆ? ನಾನು ಕ್ಷಮೆ ಕೇಳಿ ಎಂದು ಹೇಳುವುದಿಲ್ಲ. ಆದರೆ ನಿಮ್ಮ ಜವಾಬ್ದಾರಿ ಏನು ಎಂದು ಪ್ರಶ್ನಿಸಿದರು.

ಕ್ಷಮೆಗೆ ಆಗ್ರಹ: ಗೃಹಲಕ್ಷ್ಮಿ ಯೋಜನೆಯಿಂದ ತಾಯಂದಿರು, ಸಹೋದರಿಯರು ಕೆಟ್ಟು ಹೋಗಿದ್ದಾರೆ ಎಂದು ಹೇಳಿರುವ ಎಚ್.ಡಿ.ಕುಮಾರಸ್ವಾಮಿ ಕ್ಷಮೆ ಕೇಳಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ ಒತ್ತಾಯಿಸಿದರು.

ಇಂತಹ ಹೇಳಿಕೆ ನೀಡುವ ಮೂಲಕ ತಾಯಂದಿರನ್ನು ಅಪಮಾನ ಮಾಡಿದ್ದಾರೆ. ಮುಖ್ಯಮಂತ್ರಿ ಆಗಿದ್ದವರ ಬಾಯಲ್ಲಿ ಇಂತಹ ಮಾತುಗಳು ಬರಬಾರದು ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT