ಕೋವಿಡ್ ಸಂಕಷ್ಟದಿಂದ ಆರ್ಥಿಕವಾಗಿ ಬಸವಳಿದಿದ್ದ ರೈತರ ಜೊತೆಗೆ, ನಗರ ಪ್ರದೇಶಗಳಿಂದ ಬಂದ ಯುವಕರು ಈ ಬಾರಿ ಸುರಿದ ಮುಂಗಾರಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಉತ್ತಮ ಫಸಲಿಗಾಗಿ ಕಂಡಿದ್ದ ಕನಸು ಕಡೆ ಹಂತದಲ್ಲಿ ಕಮರಿದೆ.
ಮಧುಗಿರಿ ತಾಲ್ಲೂಕು ಮಳೆಯಾಶ್ರಿತ ಪ್ರದೇಶ. ಹಾಗಾಗಿ ಇಲ್ಲಿನ ಬಹುತೇಕ ರೈತರು ಶೇಂಗಾ, ಮೆಕ್ಕೆಜೋಳ, ರಾಗಿ, ತೊಗರಿ, ಅಲಸಂದೆ, ಅವರೆ ಮತ್ತು ಸಿರಿಧಾನ್ಯಗಳನ್ನು ಬೆಳೆಯುತ್ತಾರೆ. ಇಲ್ಲಿನ ರೈತರಿಗೆ ಒಮ್ಮೆ ಮಳೆ ಜಾಸ್ತಿಯಾಗಿ ಬೆಳೆ ನಷ್ಟವಾದರೆ, ಮತ್ತೊಮ್ಮೆ ಮಳೆಯಿಲ್ಲದೇ ನಷ್ಟ ಅನುಭವಿಸುವುದು ಸಾಮಾನ್ಯವಾಗಿದೆ. ಹೀಗಿದ್ದರೂ ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮನಸ್ಸು ಮಾಡಿಲ್ಲ.