ತುಮಕೂರು: ‘ಜುಲೈ 15ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸುವ ಚಿಂತನೆ ನಡೆದಿದೆ. ಕೋವಿಡ್–19ರ ಎರಡನೇ ಅಲೆಯ ಪರಿಣಾಮಗಳನ್ನು ನೋಡಿಕೊಂಡು ನಿರ್ಧರಿಸಲಾಗುವುದು’ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಶಾಲೆಗಳು ಆರಂಭವಾಗದೆ ಮಕ್ಕಳು ಗಣಿತ ಮರೆತಿದ್ದಾರೆ ಎಂದು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ಆಘಾತಕಾರಿ ವರದಿ ನೀಡಿದೆ. ಆದರೆ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣ ಎರಡನ್ನೂ ಸರ್ಕಾರ ಗಮನಿಸಬೇಕಾಗುತ್ತದೆ’ ಎಂದು ಹೇಳಿದರು.
‘ಶಾಲಾ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸಬೇಕು ಎಂಬ ಒತ್ತಡ ಬಂದಿದೆ. ಈ ಬಗ್ಗೆ ತಜ್ಞರ ಜತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. 1ರಿಂದ 5ನೇ ತರಗತಿ ಆರಂಭಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ನಿಯಮ ಉಲ್ಲಂಘಿಸುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು. ಮಾರ್ಚ್ 1ರಿಂದ 1ರಿಂದ 5ನೇ ತರಗತಿ ಆರಂಭಿಸುವ ಒಲವು ನನಗೂ ಇತ್ತು. ಆದರೆ ತಜ್ಞರ ಜತೆಗೆ ಚರ್ಚಿಸಿದ ನಂತರ ಆರಂಭಿಸದಿರಲು ನಿರ್ಧರಿಸಲಾಯಿತು’ ಎಂದು ಹೇಳಿದರು.