ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ‘ಪರಿಸರ ಕೊಳಕು ಮಾಡಬೇಡಿ’

Published 6 ಜೂನ್ 2024, 5:19 IST
Last Updated 6 ಜೂನ್ 2024, 5:19 IST
ಅಕ್ಷರ ಗಾತ್ರ

ತುಮಕೂರು: ಗಿಡ, ಮರ ನೆಡುವುದರಿಂದಷ್ಟೇ ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಿಲ್ಲ. ಕೊಳೆಯದ ತ್ಯಾಜ್ಯ ಭೂತಾಯಿ ಒಡಲು ಸೇರದಂತೆ ನೋಡಿಕೊಳ್ಳಬೇಕು. ಮಣ್ಣು, ಗಾಳಿ, ನೀರು ಕಲುಷಿತವಾಗದಂತೆ ಎಚ್ಚರ ವಹಿಸಬೇಕು ಎಂದು ವಲಯ ಅರಣ್ಯಾಧಿಕಾರಿ ಪವಿತ್ರ ಸಲಹೆ ಮಾಡಿದರು.

ನಗರದ ಕೆಎಸ್ಆರ್‌ಟಿಸಿ ಕಾರ್ಯಾಗಾರ ಘಟಕ-2ರಲ್ಲಿ ಬುಧವಾರ ಕನ್ನಡ ಕ್ರಿಯಾ ಸಮಿತಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.

ಕೆಎಸ್ಆರ್‌ಟಿಸಿ ಸಂಸ್ಥೆಯಿಂದಲೂ ಸಾಕಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದರ ಸೂಕ್ತ ನಿರ್ವಹಣೆ ಮಾಡಬೇಕು. ಬಸ್ ನಿಲ್ದಾಣಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಪರಿಸರಕ್ಕೆ ಹಾನಿಯಾಗದಂತೆ ವಿಂಗಡಿಸಿ, ವಿಲೇವಾರಿ ಮಾಡಬೇಕು ಎಂದು ಹೇಳಿದರು.

ಪ್ರವಚನಕಾರ ಮುರುಳೀಕೃಷ್ಣ, ‘ಪರಿಸರದ ಮೇಲೆ ಉಂಟುಮಾಡುತ್ತಿರುವ ಹಾನಿಯಿಂದಾಗಿ ಸಾಕಷ್ಟು ದುಷ್ಪರಿಣಾಮ ಎದುರಿಸುತ್ತಿದ್ದೇವೆ. ಇದರ ಪರಿಣಾಮವಾಗಿ ಹಲವು ನಗರ ಪ್ರದೇಶಗಳಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಪರಿಸರ ಸಂರಕ್ಷಣೆಯಿಂದಷ್ಟೇ ಇಂತಹ ಅನಾಹುತ ತಡೆಗಟ್ಟಲು ಸಾಧ್ಯವಿದೆ’ ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕ ಸಿದ್ದೇಶಗೌಡ, ‘ಐಷಾರಾಮಿ ಜೀವನ ತ್ಯಜಿಸಿ ಸಾರ್ವಜನಿಕ ಸಾರಿಗೆ ಬಳಸಬೇಕು’ ಎಂದರು.

ಕೆಎಸ್ಆರ್‌ಟಿಸಿ ಕಾರ್ಯಾಗಾರದ ವ್ಯವಸ್ಥಾಪಕ ಮಂಜುನಾಥ್, ‘ಸಂಸ್ಥೆ ಸಹ ಕಡಿಮೆ ಹೊಗೆ ಉಗುಳುವ ವಾಹನಗಳನ್ನು ಓಡಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ’ ಎಂದು ಹೇಳಿದರು.

ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಡಿ.ಹನುಮಂತರಾಯಪ್ಪ, ಸಾಹಿತಿಗಳಾದ ಬಾಪೂಜ, ಮಹದೇವಪ್ಪ, ಸಮಿತಿ ಉಪಾಧ್ಯಕ್ಷ ಮಂಜುನಾಥ್, ನಿಗಮದ ಅಧಿಕಾರಿಗಳಾದ ಆಸೀಫ್‍ವುಲ್ಲಾ, ಬಿಟಿಒ ಬಸವರಾಜು, ಅಡಳಿತಾಧಿಕಾರಿ ಬಸವರಾಜು, ಹೊನ್ನಮ್ಮ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT