ತುಮಕೂರು: ವೀರಶೈವ ಲಿಂಗಾಯತ ಸಮುದಾಯದಷ್ಟೇ ಒಕ್ಕಲಿಗರ ಸಮುದಾಯ ಸಹ ರಾಜ್ಯದಲ್ಲಿ ಪ್ರಮುಖವಾಗಿದೆ. ಈ ಸಮುದಾಯದಲ್ಲೂ ಬಡವರು ಇದ್ದಾರೆ. ಆದ್ದರಿಂದ ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಅಭಿವೃದ್ಧಿ ನಿಗಮಗಳ ಮೂಲಕ ಬಡವರ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ಕಾಡುಗೊಲ್ಲರ ಅಭಿವೃದ್ಧಿ ನಿಗಮ ರಚಿಸಲಾಗಿದೆ. ಆದರೆ ಅದಕ್ಕೆ ಹಣ ಮೀಸಲಿಟ್ಟಿಲ್ಲ. ಅಧ್ಯಕ್ಷರನ್ನು ನೇಮಿಸಿಲ್ಲ. ಈಗ ತಿಗಳ ಸಮುದಾಯ ಮತ್ತು ಬಲಿಜ ಸಮುದಾಯ ಅಭಿವೃದ್ಧಿ ನಿಯಮಕ್ಕೆ ಆಗ್ರಹಿಸುತ್ತಿವೆ ಎಂದರು.
ಶಿರಾ ಉಪಚುನಾವಣೆಗಾಗಿ ಮದಲೂರು ಕೆರೆಗೆ ಮುಖ್ಯಮಂತ್ರಿ ನೀರು ಹರಿಸಿದ್ದಾರೆ. ಜಿಲ್ಲೆಯ ಬೇರೆ ತಾಲ್ಲೂಕುಗಳು ಸಹ ಬರದಿಂದ ನಲುಗಿವೆ. ಅಲ್ಲಿಗೂ ನೀರು ಹರಿಸಬೇಕು ಎಂದು ಹೇಳಿದರು.
ಜೆಡಿಎಸ್ ತುಮಕೂರು ಜಿಲ್ಲೆಯಲ್ಲಿ ಸದೃಢವಾಗಿದೆ. ಆದರೆ ಸಂಪನ್ಮೂಲದ ಕೊರತೆಯಿಂದ ಚುನಾವಣೆಗಳಲ್ಲಿ ಸೋಲಾಗುತ್ತಿದೆ ಎಂದರು.