ತುಮಕೂರು: ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾನುವಾರ ಹಳೇ ವಿದ್ಯಾರ್ಥಿಗಳ ಸಮಾಗಮ ‘ಸೇತುಬಂಧ-2020’ ಮಹಾಸಭೆ ನಡೆಯಿತು. 1996ರಲ್ಲಿ ಅಧ್ಯಯನ ಮಾಡಿದ 25ನೇ ವರ್ಷದ ಬ್ಯಾಚ್ನ ಹಳೇ ವಿದ್ಯಾರ್ಥಿಗಳನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದ ಬಾಹ್ಯಾಕಾಶ ಅಭಿವೃದ್ಧಿ ಸಂಸ್ಥೆ ಬೆಂಗಳೂರು ಕೇಂದ್ರದ ವಿಜ್ಞಾನಿ ಬಿ.ಜಿ.ಸುನಿಲ್, ಸಿದ್ಧಾರ್ಥ ಎಂಜಿನಿ ಯರಿಂಗ್ ಸಂಸ್ಥೆ ರಾಷ್ಟ್ರದ ಪ್ರಧಾನ ಸಂಸ್ಥೆಗಳಲ್ಲಿ ಒಂದಾಗಿದೆ. ನಮಗೆ ವೃತ್ತಿಪರ ಗುರುತನ್ನು ಸಂಸ್ಥೆ ನೀಡಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್ ಮಾತನಾಡಿ, ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಋಣ ಸಂದಾಯ ಮಾಡುವ ಮನೋಧರ್ಮ ಎಲ್ಲರಲ್ಲೂ ಬರಬೇಕು. ಸಂಸ್ಥೆಯಿಂದ ಕಲಿತಿದ್ದೀರಿ-ಪಡೆದಿದ್ದೀರಿ. ಅದನ್ನು ವಾಪಸ್ ಸಮಾಜಕ್ಕೆ ನೀಡಬೇಕು. ಬಡಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುವ ಗುರುತರ ಜವಾಬ್ದಾರಿ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಸಾಹೇ ರಿಜಿಸ್ಟ್ರಾರ್ ಡಾ.ಎಂ.ಝಡ್ ಕುರಿಯನ್, ಕಾಲೇಜು ಜೀವನ ಕೇವಲ ಪಠ್ಯಕ್ಕೆ ಸೀಮಿತವಲ್ಲ. ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗುವುದರ ಮೂಲಕ ನೆನಪು ದಾಖಲಾಗುವಂತೆ ಮಾಡಿಕೊಳ್ಳುವುದೇ ನಿಜವಾದ ವಿದ್ಯಾರ್ಥಿ ಜೀವನ ಎಂದು ವ್ಯಾಖ್ಯಾನಿಸಿದರು.
ಹಳೆ ವಿದ್ಯಾರ್ಥಿ ಸಂದೀಪ್ ಕುಮಾರ್ ಸೇರಿದಂತೆ ಹಲವರು ಕಾಲೇಜು ಹಾಗೂ ಅಧ್ಯಾಪಕರೊಂದಿಗಿನ ತಮ್ಮ ಭಾವನಾತ್ಮಕ ಸಂಬಂಧ ಹಾಗೂ ಸ್ನೇಹಿತರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು. 2019-2020ನೇ ಸಾಲಿನ ಸಿವಿಲ್ ಮತ್ತು ಮೆಕಾನಿಕಲ್, ಮಾಹಿತಿ ತಂತ್ರಜ್ಞಾನ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಡಾ.ಸಿದ್ದಪ್ಪ, ನಿವೃತ್ತ ಪ್ರಾಂಶುಪಾಲ ಡಾ.ವೈ.ಎಂ.ರೆಡ್ಡಿ, ಡಾ.ಎಂ.ಕೆ ವೀರಯ್ಯ, ಹಳೇ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಡಾ. ಬಿ.ಎಸ್. ರವಿಕಿರಣ್, ಜಂಟಿ ಕಾರ್ಯದರ್ಶಿ ಕೋಮಲಾ, ಕಾರ್ಯದರ್ಶಿ ಎಂ.ಪ್ರದೀಪ್ ಇದ್ದರು.