ತುಮಕೂರು: ತಾಲ್ಲೂಕಿನ ಬೆಳ್ಳಾವಿಯಲ್ಲಿ ಸೋಮವಾರ ಮೇವು ಬ್ಯಾಂಕ್ ಆರಂಭಿಸಿದ್ದು, ಒಂದೇ ದಿನದಲ್ಲಿ ರೈತರಿಗೆ 5.48 ಟನ್ ಮೇವು ವಿತರಣೆ ಮಾಡಲಾಗಿದೆ.
ಬೆಳ್ಳಾವಿಯ ಕುವೆಂಪು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ಮೇವಿನ ವಿತರಣಾ ಕಾರ್ಡು ಪಡೆದುಕೊಂಡವರು ಮೇವು ಬ್ಯಾಂಕಿಗೆ ಭೇಟಿ ನೀಡಿ ಪ್ರತಿ ಕೆ.ಜಿಗೆ ₹2 ಪಾವತಿಸಿ ಪಡೆಯಬಹುದಾಗಿದೆ.
ಪ್ರತಿ ಜಾನುವಾರಿಗೆ ಪ್ರತಿ ದಿನಕ್ಕೆ 6 ಕೆ.ಜಿಯಂತೆ 7 ದಿನಗಳಿಗೆ 42 ಕೆ.ಜಿ ವಿತರಿಸಲಾಗುತ್ತಿದೆ. ಜಾನುವಾರುಗಳಿಗೆ ಮೇವಿನ ಅವಶ್ಯಕತೆ ಇದ್ದವರು, ನೀರಾವರಿ ಸೌಲಭ್ಯ ಇಲ್ಲದ ರೈತರಿಗೆ ಮಾತ್ರ ವಿತರಣೆ ಮಾಡಲಾಗುತ್ತಿದೆ.
ಬೆಳ್ಳಾವಿ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 7 ಸಾವಿರ ಜಾನುವಾರುಗಳಿದ್ದು, ಪ್ರತಿ ದಿನ 10 ಟನ್ ಮೇವು ವಿತರಿಸುವ ಗುರಿ ಹೊಂದಲಾಗಿದೆ. ಈಗಾಗಲೇ 184 ರೈತರು ಮೇವು ವಿತರಣಾ ಕಾರ್ಡು ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ, ತಹಶೀಲ್ದಾರ್ ಸಿದ್ದೇಶ್, ತಾ.ಪಂ ಇಒ ಹರ್ಷಕುಮಾರ್, ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಗಿರೀಶ್ಬಾಬು ರೆಡ್ಡಿ, ಸಹಾಯಕ ನಿರ್ದೇಶಕ ಡಾ.ಕಾಂತರಾಜು, ಡಾ.ರುದ್ರಪ್ರಸಾದ್, ಮಲ್ಲೇಶಪ್ಪ ಉಪಸ್ಥಿತರಿದ್ದರು.