ತುಮಕೂರು: ಜಾನಪದ ಕಲೆಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಅವು ಮುಂದಿನ ತಲೆಮಾರಿಗೂ ಉಳಿದು ಬೆಳೆಯುವಂತಾಗಬೇಕು ಎಂದು ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಆಶ್ರಯದಲ್ಲಿ ಶುಕ್ರವಾರ ನಡೆದ ‘ಜನಪರ ಉತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾನಪದ ಕಲೆಗಳು ನಮ್ಮ ಸಂಸ್ಕೃತಿಯ ಹಿರಿಮೆ. ಅವುಗಳನ್ನು ಬದುಕಲ್ಲಿ ಅಳವಡಿಸಿಕೊಂಡು ಮುಂದುವರೆಸುತ್ತಿರುವ ಕಲಾವಿದರ ಕಾರ್ಯ ಶ್ಲಾಘನೀಯ. ಈ ಜನಪರ ಉತ್ಸವ ಜನಪ್ರಿಯ ಉತ್ಸವವಾಗಬೇಕು. ಯುವ ಜನತೆ ಇಂತಹ ಕಲಾ ಪ್ರಕಾರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ಕಲೆಯ ಉಳಿವಿಗೆ ಮುಂದಾಗಬೇಕು ಎಂದು ಸಲಹೆ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ‘ಕಲಾ ಪ್ರತಿಭೆ ಹೊರಹೊಮ್ಮಲು ಇಂತಹ ಉತ್ಸವಗಳು ವೇದಿಕೆಯಾಗಲಿವೆ. ಕಲಾವಿದರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಮ್ಮ ಪ್ರತಿಭೆ ಬೆಳಗಿಸಬೇಕು.ಜಾನಪದ ಕಲೆಗಳು ವಂಶಪಾರಂಪರ್ಯವಾಗಿ, ಊರಿಂದೂರಿಗೆ ಹರಡಿ ಇಂದಿಗೂ ಜನರ ಜೀವನದಲ್ಲಿ ಬೆಸದುಕೊಂಡಿವೆ’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಶ್ರೀನಿವಾಸ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ, ನಾಟಕ ಅಕಾಡೆಮಿ ಸದಸ್ಯ ಸದಾಶಿವಯ್ಯ, ನಿವೃತ್ತ ಪ್ರಾಚಾರ್ಯ ಜಿ.ಎಚ್.ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೇಲ್ವಿಚಾರಕ ಸುರೇಶ್ ಕುಮಾರ್ ಮತ್ತಿತರರು ಇದ್ದರು.
ವಿವಿಧ ಕಲಾ ತಂಡಗಳಿಂದ ನಡೆದ ಜಾನಪದ ಕಲೆಗಳ ಪ್ರದರ್ಶನ ವೀಕ್ಷಕರನ್ನು ರಂಜಿಸಿದವು.