ವೈ.ಎನ್.ಹೊಸಕೋಟೆ: ಹೋಬಳಿಯ ಗೌಡತಿಮ್ಮನಹಳ್ಳಿ ಮತ್ತು ದಳವಾಯಿಹಳ್ಳಿ ಗ್ರಾಮಗಳಿಗೆ ಸರ್ಕಾರಿ ಬಸ್ ಸಂಚಾರ ಪ್ರಾರಂಭಿಸಿರುವುದರಿಂದ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಬಸ್ ಬರುತ್ತಿದ್ದಂತೆ ಗ್ರಾಮಸ್ಥರು ಬಸ್ಗೆ ತೋರಣ ಕಟ್ಟಿ ಪೂಜೆ ಮಾಡಿ ಸ್ವಾಗತಿಸಿದರು. ಸಿಹಿ ಹಂಚಿ ಸಂಭ್ರಮಿಸಿದರು.
ಗ್ರಾಮಕ್ಕೆ ಈವರೆಗೆ ಬಸ್ ಸೌಕರ್ಯ ಇರಲಿಲ್ಲ. ಗ್ರಾಮಸ್ಥರು ಖಾಸಗಿ ವಾಹನ ಅವಲಂಬಿಸುವುದು ಅನಿವಾರ್ಯವಾಗಿತ್ತು. ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿತ್ತು. ಗ್ರಾಮದಲ್ಲಿ ಮೂಳೆ ಮುರಿತಕ್ಕೆ ನಾಟಿ ಚಿಕಿತ್ಸೆ ನೀಡುತ್ತಿದ್ದು, ನಿತ್ಯ ಹಲವು ರೋಗಿಗಳು ಬರುತ್ತಿದ್ದಾರೆ. ಆದರೆ ಅವರಿಗೆ ಸಕಾಲಕ್ಕೆ ಬಸ್ ಸೌಕರ್ಯ ಇಲ್ಲದ ಕಾರಣ ಕಷ್ಟ ಪಡುತ್ತಿದ್ದರು.
ಶಾಸಕರು ಮತ್ತು ಕೆಎಸ್ಆರ್ಟಿಸಿ ಇಲಾಖೆಗೆ ಮನವಿ ಮಾಡಿದ್ದು, ಸ್ಪಂದಿಸಿರುವ ಅವರು ಗ್ರಾಮಕ್ಕೆ ಬಸ್ ಸೌಕರ್ಯ ಒದಗಿಸಿಕೊಟ್ಟಿದ್ದಾರೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಈರಣ್ಣ ತಿಳಿಸಿದ್ದಾರೆ.
ಈ ಸಾರಿಗೆ ವ್ಯವಸ್ಥೆ ನಿರಂತರವಾಗಿ ಸಾಗಬೇಕು. ದಿನಕ್ಕೆ ಮೂರು ಬಾರಿ ಗ್ರಾಮಕ್ಕೆ ಬಸ್ ಬಂದು ಹೋಗಬೇಕು. ಇದರಿಂದ ಗ್ರಾಮದಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸ್ಥಳೀಯ ಮುಖಂಡ ತಿಮ್ಮಪ್ಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.