ಹುಳಿಯಾರು: ಗೌರಿ- ಗಣೇಶನ ಹಬ್ಬಕ್ಕೆ ಸಾಮಾನು ಕೊಳ್ಳಲು ಜನಸಂದಣಿ ಹೆಚ್ಚಿತ್ತು. ಮಾಸ್ಕ್ ಧರಿಸಿ ಜನರು ಓಡಾಡುತ್ತಿರುವುದು ಗುರುವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಂಡು ಬಂದಿತು.
ಹಣ್ಣು, ಹೂವು, ಸೌತೆಕಾಯಿ, ಬಾಗಿನದ ಸಾಮಾನು ಕೊಳ್ಳಲು ಜನರು ಭರ್ಜರಿ ವ್ಯಾಪಾರದಲ್ಲಿ ತೊಡಗಿದ್ದರು. ಸಹಜವಾಗಿಯೇ ಹೂ ಹಾಗೂ ಹಣ್ಣಿನ ಬೆಲೆ ತುಸು ಏರಿಕೆಯಾಗಿತ್ತು. ಬಾಳೆಹಣ್ಣಿನ ಬೆಲೆಯೂ ಹೆಚ್ಚಿತ್ತು.
ಗಣೇಶನ ವಿಗ್ರಹಗಳು ಪಟ್ಟಣದ ರಂಗನಾಥ ಸ್ವಾಮಿ ದೇಗುಲದ ಮುಂಭಾಗ, ಎಣ್ಣೆ ಗಾಣದ ಆವರಣ, ತಿಪಟೂರು ರಸ್ತೆಯಲ್ಲಿ ಮಾರಾಟಕ್ಕೆ ಇಡಲಾಗಿತ್ತು.
ಚಿಕ್ಕ ಗಣಪತಿಯಿಂದ ಹಿಡಿದು ಮಧ್ಯಮ ಗಾತ್ರ ಹಾಗೂ ಮೂರು ಅಡಿ ಎತ್ತರದವರೆಗಿನ ಗಣೇಶನ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿತ್ತು.
ವಿಸರ್ಜನೆಗೆ ಕೆರೆಯಲ್ಲಿ ಅವಕಾಶ: ಇಲ್ಲಿನ ಪಟ್ಟಣ ಪಂಚಾಯಿತಿಯಿಂದ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಪಟ್ಟಣ ಬಸ್ ನಿಲ್ದಾಣದ ಬಳಿಯ ಕೇಶವಾಪುರ ಗ್ರಾಮದ ಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೆಚ್ಚು ಜನರು ಸೇರದೆ ಅಂತರ ಕಾಯ್ದು ಕೊಂಡು ಸರತಿ ಸಾಲಿನಲ್ಲಿ ನಿಂತು ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದರು.