ತುಮಕೂರು: ರಾಜ್ಯ ಆಹಾರ ನಿಗಮ (ಕೆಎಸ್ಎಫ್ಸಿ) ಉಗ್ರಾಣಗಳಲ್ಲಿ ಕೆಲಸ ಮಾಡುವ ಹಮಾಲಿಗಳಿಗೆ ನೀಡುತ್ತಿರುವ ಲೋಡ್, ಅನ್ಲೋಡ್ ಕೂಲಿ ಮೊತ್ತವನ್ನು ಹೆಚ್ಚಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಬೇಡಿಕೆ ಮನವಿಪತ್ರವನ್ನು ಸಲ್ಲಿಸಿದರು. ನಗರದ ಶಿರಾಗೇಟ್, ಹಂಚಿಹಳ್ಳಿಯಲ್ಲಿರುವ ಉಗ್ರಾಣಗಳಲ್ಲಿ ಕೆಲಸ ಮಾಡುತ್ತಿರುವ ಹಮಾಲಿಗಳಿಗೆ ಈ ಮೊದಲು ಒಂದು ಚೀಲಕ್ಕೆ ₹3.40 ನೀಡುತ್ತಿದ್ದರು. ಈಗ ಏಕಾಎಕಿ ₹2.70ಕ್ಕೆ ಇಳಿಸಿದ್ದಾರೆ. ದಿನವಿಡಿ ಮೈಬಗ್ಗಿಸಿ ದುಡಿದರೂ ಗುತ್ತಿಗೆದಾರರು ನೀಡುವ ಅತಿಕಡಿಮೆ ಕೂಲಿಯಿಂದ ಜೀವನ ಸಾಗಿಸುವುದು ಕಷ್ಟವಾಗಿದೆ ಎಂದು ದೂರಿದರು.
ರಾಜ್ಯದ ಇತರೆ ಆಹಾರ ನಿಗಮಗಳಲ್ಲಿ ಚೀಲಕ್ಕೆ ₹3.80ರಿಂದ ₹4 ನೀಡಲಾಗುತ್ತಿದೆ. ಹೆಚ್ಚು ಕೂಲಿ ಕೇಳಿದರೆ ಹೊರ ರಾಜ್ಯದಿಂದ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸುವುದಾಗಿ ಗುತ್ತಿಗೆದಾರರು ಬೆದರಿಕೆ ಹಾಕುತ್ತಿದ್ದಾರೆ. ಇಲ್ಲಿ ಮಾತ್ರ ಕಡಿಮೆ ಕಡಿಮೆ ಕೊಡಲಾಗುತ್ತಿದ್ದು, ಮೊದಲಿನಂತೆ ಕೂಲಿ ನೀಡಬೇಕು ಎಂದು ಒತ್ತಾಯಿಸಿದರು.
ಕರುನಾಡ ವಿಜಯಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸೇನೆ ಪದಾಧಿಕಾರಿಗಳಾದ ಸುಧೀರ್, ಅನಿಲ್ ನಾಯಕ್, ಜಗದೀಶ್, ಎ.ಜಿ.ಹರೀಶ್, ರಂಗನಾಥ್ ಪ್ರಸಾದ್, ಶಿವಣ್ಣ, ಮುಕ್ತಿಯಾರ್, ಯಾಸ್ಮಿನ್ ತಾಜ್, ಮಂಜುಳ ಇದ್ದರು.