ಗುಬ್ಬಿ: ಪಟ್ಟಣದ ಜನರಿಗೆ ಕುಡಿಯುವ ನೀರಿಗೆ ಮೀಸಲಿದ್ದ ಹೇರೂರು ಕೆರೆಗೆ ಹೇಮಾವತಿ ನೀರು ಹರಿಯುತ್ತಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ ಹೇಳಿದರು.
ಬುಧವಾರ ಅವರು ಹೇರೂರು ಕೆರೆಗೆ ಭೇಟಿಕೊಟ್ಟು ಮಾತನಾಡಿದರು.
ಹೇರೂರು ಕೆರೆಯಲ್ಲಿ ಹದಿನೈದು ದಿನಕ್ಕೆ ಆಗುವಷ್ಟು ಮಾತ್ರ ನೀರು ಇದ್ದುದರಿಂದ ಮುಂದಿನ ದಿನಗಳ ಬಗ್ಗೆ ಆತಂಕ ಉಂಟಾಗಿತ್ತು. ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಂಸದರ ಗಮನಕ್ಕೆ ತಂದಾಗ ಅವರು ಒಪ್ಪಿ ಅಧಿಕಾರಿಗಳಿಗೆ ನೀರು ಬಿಡುವಂತೆ ಸೂಚಿಸಿದ್ದರು. ಹೇರೂರು ಕೆರೆಗೆ ನೀರು ಹರಿಸಲು ಅನುವು ಮಾಡಿ ಕೊಟ್ಟಿದ್ದರಿಂದ ಮುಂದಿನ ದಿನಗಳಲ್ಲಿ ಪಟ್ಟಣದ ಜನರಿಗೆ ತೊಂದರೆ ಇಲ್ಲದೆ ಕುಡಿಯುವ ನೀರು ಒದಗಿಸಬಹುದು ಎಂದರು.
ಯಾವುದೇ ತೊಂದರೆ ಇಲ್ಲದೆ ಹೇಮಾವತಿ ನಾಲೆಗೆ ನೀರು ಹರಿಯುತ್ತಿದೆ. ಹೇರೂರು ಕೆರೆಯಲ್ಲಿ ನೀರು ಸಂಗ್ರಹ ಆಗುವವರೆಗೆ ಸದರಿ ಉಪ ನಾಲೆ ಸುತ್ತಲಿನ ರೈತರು ನಾಲೆಯಲ್ಲಿ ಹರಿಯುತ್ತಿರುವ ನೀರಿಗೆ ಅಡ್ಡಿಪಡಿಸಬೇಡಿ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಯೋಗೀಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ಜಿ.ಆರ್. ಶಿವಕುಮಾರ್, ಕೃಷ್ಣಮೂರ್ತಿ ಉಪಸ್ಥಿತರಿದ್ದರು.