ತುಮಕೂರು: ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಎಚ್ಐವಿ ರೋಗಾಣು ಹೆಚ್ಚುತ್ತಿದೆ. ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಟಿ.ಹೇಮಾದ್ರಿ ನಾಯ್ಡು ತಿಳಿಸಿದರು.
ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಮತ್ತು ಎನ್ಎಸ್ಎಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕಾಲೇಜಿನಲ್ಲಿ ನಡೆದ ಎಚ್ಐವಿ ಮತ್ತು ಏಡ್ಸ್ ಸುರಕ್ಷತೆಯ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಾಗಲೇ ಏಡ್ಸ್ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಎಚ್ಐವಿ ಮತ್ತು ಏಡ್ಸ್ ತಡೆ ಬಗ್ಗೆ ನಾವು ಮಾಹಿತಿ ತಿಳಿದುಕೊಂಡಿರಬೇಕು. ಕ್ಷಯ ರೋಗದ ಬಗ್ಗೆಯೂ ಜಾಗೃತಿ ಮೂಡಿಸಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ರಂಗಸ್ವಾಮಿ, ‘ಎಚ್ಐವಿ ಪೀಡಿತರು ದಿನೇ ದಿನೇ ರೋಗ ನಿರೋಧಕ ಶಕ್ತಿ ಕಳೆದುಕೊಳ್ಳುವರು’ ಎಂದು ವಿವರಿಸಿದರು.
ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್, ಡಾ.ಸಿ.ಪಿ. ಚಂದ್ರಪ್ಪ, ಕೆ.ಶಶಿಕುಮಾರ್, ಪ್ರೊ.ಬಿ.ಎನ್.ಪ್ರತಾಪ್ ಇದ್ದರು.