ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಚಿಂಪುಗಾನಹಳ್ಳಿಯಲ್ಲಿ 10 ಗುಡಿಸಲುಗಳು ಬೆಂಕಿಗಾಹುತಿಯಾದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಭಾನುವಾರ ಭೇಟಿ ನೀಡಿ ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿದರು.
ಏ.26 ರಂದು ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಗುಡಿಸಲು ಸುಟ್ಟು ಹೋಗಿದ್ದವು. ಪರಮೇಶ್ವರ ಸೂರು ಕಳೆದುಕೊಂಡವರ ಪಟ್ಟಿ ಪಡೆದು ವೈಯಕ್ತಿಕವಾಗಿ ಪರಿಹಾರ ವಿತರಿಸಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿ, ಈ ಹಿಂದೆಯೂ ಇದೇ ರೀತಿಯಾಗಿತ್ತು. ಇಲ್ಲಿನ ನಿವಾಸಿಗಳಿಗೆ ನಿವೇಶನ ನೀಡಲು 9 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ. ಚುನಾವಣೆ ನಂತರ ಜಾಗ ಹಂಚಿಕೆ ಮಾಡಿ, ಮನೆ ನಿರ್ಮಿಸಿ ಕೊಡಲಾಗುವುದು. ಅವಿಭಕ್ತ ಕುಟುಂಬಗಳ ಚಿಕ್ಕ ಕುಟುಂಬಗಳಾಗಿ ವಿಭಜನೆಯಾಗುತ್ತಿವೆ. ಎಲ್ಲರಿಗೂ ಮನೆ ಕಟ್ಟಿಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಕೆಲವರು ಖಾಲಿ ಇರುವ ಸರ್ಕಾರಿ ಜಮೀನುಗಳಲ್ಲಿ ಗುಡಿಸಿಲು ಹಾಕಿಕೊಂಡರೆ ನಿವೇಶನ ನೀಡುತ್ತಾರೆ ಎನ್ನುವ ಮನೋಭಾವದಲ್ಲಿ ಇದ್ದಾರೆ. ಜನಪ್ರತಿನಿಧಿಗಳ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಅರ್ಹರಿಗೆ ಮಾತ್ರ ನಿವೇಶನ ಮಂಜೂರು ಮಾಡಬೇಕು ಎಂದು ತಿಳಿಸಿದರು.