ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ಕ್ಷೇತ್ರದಲ್ಲೂ ಸ್ವಾವಲಂಬನೆ: ಹೆಲಿಕಾಪ್ಟರ್ ಘಟಕ ಉದ್ಘಾಟಿಸಿ ಮೋದಿ ಮಾತು

Last Updated 6 ಫೆಬ್ರುವರಿ 2023, 14:47 IST
ಅಕ್ಷರ ಗಾತ್ರ

ತುಮಕೂರು: ರಕ್ಷಣಾ ಕ್ಷೇತ್ರದಲ್ಲೂ ದೇಶ ಸ್ವಾವಲಂಬನೆಯತ್ತ ಹೆಜ್ಜೆ ಹಾಕಿದ್ದು, ಮುಂದಿನ ದಿನಗಳಲ್ಲಿ ವಿದೇಶಗಳ ಅವಲಂಬನೆ ಕಡಿಮೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್ ಬಳಿ ನಿರ್ಮಿಸಿರುವ ಎಚ್‌ಎಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಸೋಮವಾರ ದೇಶಕ್ಕೆ ಸಮರ್ಪಿಸಿ ಮಾತನಾಡಿದರು.

ಹಿಂದಿನ ದಿನಗಳಲ್ಲಿ ರಕ್ಷಣಾ ಕ್ಷೇತ್ರಕ್ಕೆ ಬೇಕಾದ ಶೇ 90ರಷ್ಟು ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲಾಗುತಿತ್ತು. ಈಗ ಅದನ್ನು ಶೇ 60ರಷ್ಟಕ್ಕೆ ಇಳಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಮತ್ತಷ್ಟು ತಗ್ಗಿಸಲಾಗುವುದು. ವಿದೇಶಗಳ ಅವಲಂಬನೆ ಕಡಿಮೆ ಮಾಡುವುದೇ ನಮ್ಮ ಉದ್ದೇಶ. ಒಟ್ಟಾರೆಯಾಗಿ ರಕ್ಷಣಾ ಕ್ಷೇತ್ರವನ್ನು ಸ್ವಾವಲಂಬಿಯನ್ನಾಗಿ ಮಾಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.

ರಫೆಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಆರೋಪ ಮಾಡಿದರು. ಎಚ್‌ಎಎಲ್ ಮಾರಾಟ ಮಾಡಲಾಗುತ್ತಿದೆ ಎಂದು ಸುಳ್ಳು ಹೇಳಿಕೊಂಡು ಬಂದರು. ಹತ್ತು ಬಾರಿ ಸುಳ್ಳು ಹೇಳಿ, ನಿಜಮಾಡಲು ಹೊರಟವರಿಗೆ ಈಗ ಎಚ್‌ಎಎಲ್ ಘಟಕ ಆರಂಭಿಸಿ, ಹೆಲಿಕಾಫ್ಟರ್ ಉತ್ಪಾದನೆ ಆರಂಭವಾಗಿರುವುದೇ ಸಾಕ್ಷಿಯಾಗಿದೆ. ಗುಬ್ಬಿ ಘಟಕದಲ್ಲಿ ದೊಡ್ಡ ಮಟ್ಟದಲ್ಲಿ ಹೆಲಿಕಾಫ್ಟರ್ ಉತ್ಪಾದಿಸಿ ಟೀಕೆ ಮಾಡುವವರಿಗೆ ಉತ್ತರ ನೀಡಲಾಗುವುದು. ಎಲ್ಲವನ್ನೂ ಅಭಿವೃದ್ಧಿ ಮೂಲಕ ತೋರಿಸುತ್ತೇವೆ ಎಂದು ವಿರೋಧ ಪಕ್ಷಗಳಿಗೆ ತಮ್ಮದೇ ಧಾಟಿಯಲ್ಲಿ ಕುಟುಕಿದರು.

ರಾಜ್ಯದ ತಂತ್ರಜ್ಞರು, ಎಂಜಿನಿಯರುಗಳು ಡ್ರೋಣ್, ತೇಜಸ್‌ನಂತಹ ಯುದ್ಧ ವಿಮಾನಗಳನ್ನು ಕೊಡುಗೆಯಾಗಿ ನೀಡಿದ್ದು, ಇದು ದೇಶದ ಸೇನೆಯ ಆತ್ಮಬಲವನ್ನು ಹೆಚ್ಚಿಸಿದೆ. ಎಚ್‌ಎಎಲ್‌ಗೆ ಮತ್ತಷ್ಟು ಶಕ್ತಿ ತುಂಬಲಾಗುವುದು. ಮುಂದಿನ ದಿನಗಳಲ್ಲಿ ₹4 ಲಕ್ಷ ಕೋಟಿ ವಹಿವಾಟು ನಡೆಸುವ ಸಂಸ್ಥೆಯನ್ನಾಗಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

35 ನಿಮಿಷಗಳ ಭಾಷಣದಲ್ಲಿ ದೇಶದ ಪ್ರಗತಿ, ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪಿಸುತ್ತಲೇ ವಿರೋಧಿಗಳನ್ನೂ ಟೀಕಿಸಿದರು. ಡಬಲ್ ಎಂಜಿನ್ ಸರ್ಕಾರ ಅಧಿಕಾರದಲ್ಲಿ ಇದ್ದರೆ ಪ್ರಗತಿ ಸಾಧ್ಯವಾಗಲಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಬೇಕು ಎಂದು ಹೇಳುತ್ತಲೇ ಮತಯಾಚನೆಯನ್ನೂ ಮಾಡಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘ಕರ್ನಾಟಕದ ಅಭಿವೃದ್ಧಿ ಮಾದರಿ ಗಮನಿಸಿದರೆ, ಭಾರತ ಯಾವ ರೀತಿ ಪ್ರಗತಿ ಹೊಂದುತ್ತಿದೆ ಎಂಬುದು ತಿಳಿಯುತ್ತದೆ. ರಕ್ಷಣಾ ಉಪಕರಣಗಳ ತಯಾರಿಕೆಯಲ್ಲೂ ಮುಂಚೂಣಿಯಲ್ಲಿದ್ದು, ಎಚ್‌ಎಎಲ್ ಘಟಕದಲ್ಲಿ ಶಕ್ತಿಶಾಲಿ ಹೆಲಿಕಾಫ್ಟರ್‌ಗಳನ್ನು ತಯಾರಿಸುವ ಯೋಜನೆ ಹಾಕಿಕೊಳ್ಳಲಾಗಿದೆ’ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT