ತುಮಕೂರು: ಮಹಿಳೆಯರು ಸಮಾಜಸೇವೆ ಮಾಡಲು ಇನ್ನರ್ವೀಲ್ ಉತ್ತಮ ವೇದಿಕೆಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರಿಗೆ ಉತ್ತಮ ಅವಕಾಶವನ್ನು ಸಂಸ್ಥೆ ಕಲ್ಪಿಸುತ್ತಿದೆ ಎಂದು ಇನ್ನರ್ವೀಲ್ ಜಿಲ್ಲಾ ಘಟಕದ ಅಧ್ಯಕ್ಷೆ ಲಲನಾಮೂರ್ತಿ ತಿಳಿಸಿದರು.
ನಗರದಲ್ಲಿ ನಡೆದ ಇನ್ನರ್ವೀಲ್ 2019–20ನೇ ಸಾಲಿನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
‘ಗೃಹಿಣಿಯರು ಬಿಡುವಿನ ವೇಳೆಯಲ್ಲಿ ಸಮಾಜ ಸೇವೆ ಮಾಡಬಹುದು ಎನ್ನುವುದನ್ನು ಇನ್ನರ್ವೀಲ್ ತೋರಿಸಿಕೊಟ್ಟಿದೆ. ಹೊಸ ಪದಾಧಿಕಾರಿಗಳು ಸದಸ್ಯರ ಸಹಕಾರದೊಂದಿಗೆ ಉತ್ತಮ ಕೆಲಸ ಮಾಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನರ್ವೀಲ್ ತುಮಕೂರು ಘಟಕದ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ವಿಮಲಾ ಶಿವಸ್ವಾಮಿ ಮಾತನಾಡಿ, ಸಮಾಜ ಸೇವೆ ಮಾಡಬೇಕು ಎಂಬ ಸದುದ್ದೇಶ ಇದೆ. ಸದಸ್ಯರ ಸಹಕಾರದಿಂದ ಅಧ್ಯಕ್ಷೆಯಾಗಿ ಆಯ್ಕೆ ಆಗಿದ್ದೇನೆ. ಎಲ್ಲರ ಸಹಕಾರ ಪಡೆದು ಕಾರ್ಯನಿರ್ವಹಿಸಲಾಗುವುದು’ ಎಂದು ತಿಳಿಸಿದರು.
ಜು.27ರಂದು ಇನ್ನರ್ವೀಲ್ನಿಂದ ಸಿದ್ಧಗಂಗಾ ಮಠದಲ್ಲಿ 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಚರ್ಮ ರೋಗ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ವೈದ್ಯರು ಹಾಗೂ ಜಿಲ್ಲಾ ಕುಷ್ಟ ರೋಗನಿವಾರಣಾಧಿಕಾರಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದರು.
ಇನ್ನರ್ವೀಲ್ ನೂತನ ಘಟಕದ ಪದಗ್ರಹಣದ ಹಿನ್ನೆಲೆಯಲ್ಲಿ ಕ್ಯಾತ್ಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೀಲ್ಚೇರ್, ಸೀತಾ ಶಾಲೆಗೆ ಕಂಪ್ಯೂಟರ್ ಹಾಗೂ ಬಡ ವಿದ್ಯಾರ್ಥಿಗೆ ವ್ಯಾಸಂಗಕ್ಕಾಗಿ ಧನ ಸಹಾಯ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎ.ಸಿ.ಸದಸ್ಯರಾದ ವಿದ್ಯಾ ಮೋಹನ್, ನಿಕಟಪೂರ್ವ ಅಧ್ಯಕ್ಷೆ ನಾಗಮಣಿ ಪ್ರಭಾಕರ್, ಉಪಾಧ್ಯಕ್ಷರಾದ ವೀಣಾ ಉಮಾಶಂಕರ್, ಕಾರ್ಯದರ್ಶಿ ಉಮಾ ಕಾಡದೇವರಮಠ್, ಖಜಾಂಚಿ ಮಂಜುಳಾ ಲೋಕೇಶ್, ಐಎಸ್ಒ ಭಾಗ್ಯಲಕ್ಷ್ಮೀ ನಾಗರಾಜ್, ಎಡಿಟರ್ ಪರಿಮಳಾ ಮಲ್ಲಿಕ್ ಇದ್ದರು.