ಹುಳಿಯಾರು: ನಫೆಡ್ ಮೂಲಕ ಶೀಘ್ರ ರಾಗಿ ಖರೀದಿ ಆರಂಭಿಸಬೇಕು ಎಂದು ಒತ್ತಾಯಿಸಿ ರೈತಸಂಘದ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಕಾರ್ಯಕರ್ತರು ಪಟ್ಟಣದ ಎಪಿಎಂಸಿ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.
ರಾಗಿ ಖರೀದಿ ಮಾಡುವುದಾಗಿ ಸರ್ಕಾರ ತಿಂಗಳ ಹಿಂದೆಯೇ ಆದೇಶ ನೀಡಿತ್ತು. ಅಧಿಕಾರಿಗಳು ಖರೀದಿ ಆರಂಭಿಸುವುದಾಗಿ ಕಚೇರಿ ಉದ್ಘಾಟಿಸಿದ್ದರು. ರೈತರಿಂದ ದಾಖಲೆಗಳನ್ನು ಪಡೆದು ಕೆಲವು ದಿನಗಳೇ ಆದರೂ ಖರೀದಿ ಮಾತ್ರ ಆರಂಭವಾಗಿಲ್ಲ ಎಂದು ಆರೋಪಿಸಿದರು.
ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ, ಸರ್ಕಾರ ರಾಗಿ ಖರೀದಿ ಮಾಡುವುದಾಗಿ ರೈತರನ್ನು ನಂಬಿಸಿ ದಾಖಲೆ ಪಡೆದಿದ್ದಾರೆ. ಆದರೆ ದಿನಗಳನ್ನೂ ಮುಂದೂಡುತ್ತಾ ಹಲವು ನೆಪಗಳನ್ನು ಒಡ್ಡಿ ಕಾಲಹರಣ ಮಾಡುತ್ತಿದ್ದಾರೆ. ನಿತ್ಯ ರೈತರು ಖರೀದಿ ಕೇಂದ್ರದ ಬಳಿ ಬಂದು ದಾರಿಗೆ ಸುಂಕವಿಲ್ಲದೆ ಹೋಗಿತ್ತಿದ್ದಾರೆ. ರೈತರ ಸಂಕಷ್ಟ ನೋಡಿ ಅನಿವಾರ್ಯ ಕಾರಣದಿಂದ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.
ವಿಷಯ ಅರಿತು ಸ್ಥಳಕ್ಕೆ ಬಂದ ನಫೆಡ್ ಖರೀದಿ ಅಧಿಕಾರಿ ಶಿವಶಂಕರ್ ಧರಣಿ ನಿರತರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಧರಣಿ ನಿರತರು ಪಟ್ಟು ಸಡಿಲಿಸದಿರುವುದನ್ನು ಗಮನಿಸಿ ಜಂಟಿ ಕೃಷಿ ಉಪನಿರ್ದೇಶಕರಿಗೆ ವಿಷಯ ಮುಟ್ಟಿಸಿದರು. ದೂರವಾಣಿ ಮೂಲಕ ಧರಣಿನಿರತರನ್ನು ಸಂಪರ್ಕಿಸಿದ ಜಂಟಿ ಕೃಷಿ ಉಪನಿರ್ದೇಶಕರು ಮಂಗಳವಾರದೊಳಗೆ ಖರೀದಿ ಆರಂಬಿಸುವ ಭರವಸೆ ನೀಡಿದರು.
ಸಂಜೆ ವೇಳೆಗೆ ನೀಡಿದ ಭರವಸೆಯಂತೆ ರೈತಸಂಘದ ಕಾರ್ಯಕರ್ತರು ಧರಣಿ ಹಿಂಪಡೆದಿದ್ದು ಬುಧವಾರ ಮತ್ತೆ ಧರಣಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರೈತಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಮಲ್ಲಿಕಾರ್ಜುನಯ್ಯ, ಪದಾಧಿಕಾರಿಗಳಾದ ಕಾಡಿನರಾಜ, ಯೋಗೀಶ್ವರಯ್ಯ, ಕಂಪನಹಳ್ಳಿ ಪ್ರಕಾಶ್ಪಾತ್ರ ಸತೀಶ್ ಇದ್ದರು.