ಗುಬ್ಬಿ ತಾಲ್ಲೂಕು ಚೇಳೂರು ಹಲಸಿನ ಮಾರುಕಟ್ಟೆ ಕೆಲವು ವರ್ಷಗಳಿಂದ ದೇಶದ ಗಮನ ಸೆಳೆದಿದೆ. ಚೇಳೂರು ಸಮೀಪದ ಸೀಗೇನಹಳ್ಳಿ ಸಿದ್ದಪ್ಪ ಅವರ ಮರದ ಕಸಿ ಗಿಡಗಳು ‘ಸಿದ್ದು ಹಲಸು’ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರದವರು ದೇಶದಲ್ಲಿ ಪ್ರಥಮ ಬಾರಿಗೆ ರೈತನ ಹೆಸರಿನಲ್ಲಿ ಸಿದ್ದು ಸಸಿಗಳನ್ನು ಬಿಡುಗಡೆ ಮಾಡಿದರು. ಮಾರಾಟದಿಂದ ಬಂದ ಹಣದಲ್ಲಿ ಶೇ 75 ಭಾಗವನ್ನು ರೈತನಿಗೆ ನೀಡುತ್ತಿದ್ದಾರೆ. ಸಿದ್ದು ಜತೆ ತಿಪಟೂರು ತಾಲ್ಲೂಕಿನ ಶಂಕರ ಹೆಸರಿನ ಹಲಸಿನ ಸಸಿಗಳೂ ಜನಪ್ರಿಯವಾಗುತ್ತಿವೆ.