ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅವಸಾನದ ಅಂಚಿಗೆ ಶಿರಾದ ಜಾಜಮ್ಮನ ಕಟ್ಟೆ

22 ಎಕರೆ ವಿಸ್ತೀರ್ಣದ ಕಟ್ಟೆಗೆ ಒತ್ತುವರಿ ಸಂಕಟ: ಬಯಲು ಶೌಚಾಲಯವಾದ ವಾಕಿಂಗ್ ಪಾತ್
ಎಚ್.ಸಿ.ಅನಂತರಾಮು
Published 11 ಮಾರ್ಚ್ 2024, 6:46 IST
Last Updated 11 ಮಾರ್ಚ್ 2024, 6:46 IST
ಅಕ್ಷರ ಗಾತ್ರ

ಶಿರಾ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಗರದ ಜೀವನಾಡಿಯಾಗಬೇಕಿದ್ದ ಜಾಜಮ್ಮನ (ಜಾಜಿ) ಕಟ್ಟೆ ಅವಸಾನದ ಅಂಚಿಗೆ ಸರಿದಿದೆ.

ಕೆರೆ, ಕಟ್ಟೆಗಳು ಪರಿಸರದ ಅಮೂಲ್ಯ ಜಲರಾಶಿ. ಇಂತಹ ಜಲರಾಶಿಗೆ ನಗರದಲ್ಲಿ ಕಂಟಕ ಎದುರಾಗಿದೆ. ಜಾಜಮ್ಮನ ಕಟ್ಟೆ ಅಭಿವೃದ್ಧಿ ಕಾಣದೆ ಗಿಡ ಮರಗಳು ಬೆಳೆದುನಿಂತಿವೆ.

ಬಾಲಾಜಿನಗರ, ವಿದ್ಯಾನಗರ, ಸಪ್ತಗಿರಿ ಬಡಾವಣೆಗೆ ಹೊಂದಿಕೊಂಡಿರುವ ಜಾಜಿ ಕಟ್ಟೆಯು 22 ಎಕರೆ 33 ಗುಂಟೆ ವಿಸ್ತೀರ್ಣ ಹೊಂದಿದೆ. ಸದ್ಯ ಕಟ್ಟೆ ಒತ್ತುವರಿಯಾಗಿದ್ದು, ಅದರ ವಿಸ್ತೀರ್ಣ ದಾಖಲೆಗಳಿಗೆ ಸೀಮಿತವಾಗಿದೆ.

ಜಾಜಿ ಕಟ್ಟೆಯಲ್ಲಿ ನೀರಿದ್ದರೆ ಅಂತರ್ಜಲ ಹೆಚ್ಚಿ ನಗರದ ಬಹುತೇಕ ಕೊಳವೆ ಬಾವಿಗಳಲ್ಲಿ ನೀರು ಬರುತ್ತವೆ. ನಗರದ ಶೇ 90ರಷ್ಟು ಕೊಳವೆ ಬಾವಿಗಳಿಗೆ ಜಾಜಿ ಕಟ್ಟೆ ಆಧಾರವಾಗಿದೆ. ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ಅಸರೆಯಾಗಿದೆ.

ಜಾಜಿಕಟ್ಟೆಯಲ್ಲಿ ಹಿಂದೆ ಮೀನು ಸಾಗಾಣಿಕೆ ಮಾಡಲಾಗುತ್ತಿತ್ತು. ಇದರಿಂದ ಸರ್ಕಾರಕ್ಕೆ ಆದಾಯ ಬರುತ್ತಿತ್ತು. ಆದರೆ ಇಂದು ಕೆರೆಯಲ್ಲಿ ಅಂತರಗಂಗೆ ಬೆಳೆದು ನಿಂತಿದೆ. ನೀರು ಇರುವುದು ಸಹ ಕಾಣದಂತಾಗಿದೆ. ಅಂತರಗಂಗೆ ಒಣಗಿದರೆ ಮಾತ್ರ ನೀರಿಲ್ಲ ಎನ್ನುವಂತಾಗಿದೆ. ಅಂತರಗಂಗೆಯನ್ನು ತೆರವುಗೊಳಿಸಲು ಹಲವು ಬಾರಿ ಪ್ರಯತ್ನ ನಡೆಸಿ ಅಲ್ಪಸ್ವಲ್ಪ ತೆಗೆದು ಬಿಲ್ ಮಾಡಿಕೊಂಡಿದ್ದನ್ನು ಬಿಟ್ಟರೆ ಅದನ್ನು ಸಂಪೂರ್ಣವಾಗಿ ತೆರವುಗೊಳಿಸಿಲ್ಲ. ಇದರಿಂದಾಗಿ ಕಟ್ಟೆಯಲ್ಲಿದ್ದ ಅಪಾರ ಪ್ರಮಾಣದ ಜಲಚರಗಳು ಕಣ್ಮರೆಯಾಗುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ನೀರಿನ ಮೂಲ ಬಂದ್: ಜಾಜಿ ಕಟ್ಟೆಗೆ ಬರುತ್ತಿದ್ದ ನೀರಿನ ಮೂಲಗಳು ಬಹುತೇಕ ಕಡೆ ಮುಚ್ಚಿಹೋಗಿವೆ. ಬೈಪಾಸ್, ಲೇಔಟ್‌ ನಿರ್ಮಾಣದಿಂದಾಗಿ ಬರುವ ನೀರಿಗೆ ತಡೆಯಾಗಿದೆ. ನೀರು ಬರಲು ರಾಜಕಾಲುವೆ ನಿರ್ಮಿಸಿ ನಕ್ಷೆಯಲ್ಲಿ ಇರುವಂತೆ ಮಾಡದೆ ತಮಗೆ ಬೇಕಾದ ರೀತಿಯಲ್ಲಿ ನಿರ್ಮಾಣ ಮಾಡಿದ್ದಾರೆ. ರಾಜ ಕಾಲುವೆಯಲ್ಲಿ ಮಳೆ ನೀರು ಹರಿಯುವುದಕ್ಕಿಂತ ಹೆಚ್ಚಾಗಿ ಮನೆಗಳ ಶೌಚಾಲಯದ ನೀರು, ಮಲ, ಮೂತ್ರ ಹರಿದು ಬರುತ್ತಿದೆ. ಬಹುತೇಕ ಕಡೆ ಶೌಚಾಲಯದ ಮಲ, ಮೂತ್ರವನ್ನು ರಾಜಕಾಲುವೆಗೆ ಬಿಟ್ಟಿದ್ದಾರೆ ಎಂಬ ಆರೋಪವೂ ಇದೆ.

ಜಾಜಿಕಟ್ಟೆಯ ಅಭಿವೃದ್ಧಿಗಾಗಿ 2017ರಲ್ಲಿ ಟಿ.ಬಿ.ಜಯಚಂದ್ರ ಅವರು ಸಚಿವರಾಗಿದ್ದಾಗ ₹2 ಕೋಟಿ ಬಿಡುಗಡೆ ಮಾಡಿಸಿದರು. 2018ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಸೋತ ನಂತರ ಕಾಮಗಾರಿ ಪ್ರಾರಂಭಿಸಲಾಯಿತು. ಆದರೆ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ. ಜಾಜಿ ಕಟ್ಟೆಗೆ ಸುತ್ತಲೂ ಏರಿ ನಿರ್ಮಿಸಿ, ಏರಿಯ ಮೇಲೆ ವಾಯುವಿಹಾರ ನಡೆಸಲು ವಾಕಿಂಗ್ ಪಾತ್ ನಿರ್ಮಿಸಿ, ವಿಶ್ರಾಂತಿ ಪಡೆಯಲು ಕುರ್ಚಿ ಹಾಕಿಸುವುದಾಗಿ ಹೇಳಲಾಗಿತ್ತು. ಆದರೆ ಒತ್ತುವರಿ ತೆರವಿಗೆ ನಗರಸಭೆ ವಿಫಲವಾದ ಕಾರಣ ಏರಿ ಕಾಮಗಾರಿ ಅಪೂರ್ಣಗೊಂಡಿದೆ. ₹1.20 ಕೋಟಿ ಖರ್ಚು ಮಾಡಿದ್ದು, ₹80 ಲಕ್ಷ ಉಳಿದಿದೆ.

ಏರಿಯ ಮೇಲೆ ವಾಯುವಿಹಾರ ನಡೆಸಲು ನಿರ್ಮಿಸಿದ್ದ ವಾಕಿಂಗ್ ಪಾತ್ ಬಯಲು ಶೌಚಾಲಯವಾಗಿದೆ. ಏರಿ ಮೇಲೆ ಜಾಲಿ ಗಿಡ ಬೆಳೆದಿದ್ದು, ಅಲ್ಲಿ ಹೋಗಲು ಸಾಧ್ಯವಾಗದ ಕಾರಣ ಕೆಲವರು ನಿತ್ಯ ಅಲ್ಲಿಯೇ ಮಲ ವಿಸರ್ಜನೆ ಮಾಡುತ್ತಿದ್ದಾರೆ.

ಜಾಜಿಕಟ್ಟೆಗೆ ಮಲಿನ ನೀರು ಹರಿದುಬರುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಜಾಜಿಕಟ್ಟೆ ಮುಂದೆಯೇ ಸರ್ಕಾರಿ ಆಸ್ಪತ್ರೆ ಇದ್ದು, ಕಟ್ಟೆಯ ಮಲೀನತೆ ರೋಗಿಗಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ.

ಯಾರಿಗೆ ಸೇರುವುದು: ಜಾಜಿಕಟ್ಟೆ ಯಾವ ಇಲಾಖೆಗೆ ಸೇರುತ್ತದೆ ಎನ್ನುವ ಬಗ್ಗೆ ಯಾರಲ್ಲೂ ಸ್ಪಷ್ಟ ಮಾಹಿತಿ ಇಲ್ಲ. ಸಣ್ಣ ನೀರಾವರಿ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗ, ನಗರಸಭೆ, ಶಿರಾ ಯೋಜನಾ ಪ್ರಾಧಿಕಾರ ಸೇರಿದಂತೆ ಯಾರೂ ಅದರ ಜವಾಬ್ದಾರಿ ಹೊರಲು ಸಿದ್ಧವಿಲ್ಲ. 2017ರಲ್ಲಿ ₹2 ಕೋಟಿ ಬಿಡುಗಡೆಯಾದ ಸಮಯದಲ್ಲಿ ಶಿರಾ ಯೋಜನಾ ಪ್ರಾಧಿಕಾರದ ಸೂಚನೆಯಂತೆ ಸಣ್ಣ ನೀರಾವರಿ ಇಲಾಖೆ ಅವರು ಏರಿ ನಿರ್ಮಾಣ ಕಾಮಗಾರಿ ನಡೆಸಿದ್ದಾರೆ. ಉಳಿದಂತೆ ಈಗ ಯಾರೂ ಅದರ ಅಭಿವೃದ್ಧಿಗೆ ಮುಂದಾಗಿಲ್ಲ.

ತುಮಕೂರಿನ ಅಮಾನಿಕೆರೆ ಮಾದರಿಯಲ್ಲಿ ಜಾಜಿಕಟ್ಟೆ ಅಭಿವೃದ್ಧಿಪಡಿಸಿ ಬೋಟಿಂಗ್ ವ್ಯವಸ್ಥೆ ಮಾಡಲಾಗುವುದು. ಸಂಜೆ ನಗರದ ಜನತೆ ತಮ್ಮ ಮಕ್ಕಳ ಜೊತೆ ಭೇಟಿ ನೀಡಿ ಜಾಜಿಕಟ್ಟೆಯ ಸೊಬಗು ಸವಿಯುವಂತೆ ಮಾಡಲಾಗುವುದು ಎಂದು ಇದುವರೆಗೂ ಅಧಿಕಾರ ಅನುಭವಿಸಿದ ಶಾಸಕರು ಹೇಳುತ್ತಿದ್ದರು. ಆದರೆ ಅದನ್ನು ಕಾರ್ಯರೂಪಕ್ಕೆ ತರುವ ಕೆಲಸ ಇದುವರೆಗೂ ಸಾಧ್ಯವಾಗಿಲ್ಲ.

ಜಾಜಿ ಕಟ್ಟೆ ಗತವೈಭವವನ್ನು ಕಳೆದುಕೊಳ್ಳುತ್ತಿದ್ದು ಅವಸಾನದ ಹಂಚಿಕೆ ಸರಿಯುತ್ತಿದೆ. ಈ ಬಗ್ಗೆ ಅಧಿಕಾರಿಗಳು, ಸ್ಥಳೀಯ ಆಡಳಿತ ಹಾಗೂ ಶಾಸಕ ಟಿ.ಬಿ.ಜಯಚಂದ್ರ ಎಚ್ಚೆತ್ತುಕೊಳ್ಳದಿದ್ದರೆ ಜಾಜಿಕಟ್ಟೆ ಕಣ್ಮರೆಯಾಗುವ ದಿನಗಳು ದೂರವಿಲ್ಲ ಎಂಬ ಆತಂಕ ಸಾರ್ವಜನಿಕರದ್ದು.

ಜಾಜಮ್ಮನಕಟ್ಟೆಗೆ ಹರಿಯುತ್ತಿರುವ ಮಲಿನ ನೀರು
ಜಾಜಮ್ಮನಕಟ್ಟೆಗೆ ಹರಿಯುತ್ತಿರುವ ಮಲಿನ ನೀರು
ಜಾಜಮ್ಮನಕಟ್ಟೆಯ ಏರಿಯ ಮೇಲೆ ಬೆಳೆದಿರುವ ಜಾಲಿಗಿಡ
ಜಾಜಮ್ಮನಕಟ್ಟೆಯ ಏರಿಯ ಮೇಲೆ ಬೆಳೆದಿರುವ ಜಾಲಿಗಿಡ
ಆರ್.ರಾಮು
ಆರ್.ರಾಮು
ಉಮಾ ವಿಜಯರಾಜು
ಉಮಾ ವಿಜಯರಾಜು
ಸುನೀತಾ
ಸುನೀತಾ
ಆರ್ ಕೆ ರಂಗನಾಥ್
ಆರ್ ಕೆ ರಂಗನಾಥ್

ಅಮಾನಿಕೆರೆ ಮಾದರಿಯಲ್ಲಿ ಅಭಿವೃದ್ಧಿ ನಗರದ ಜೀವನಾಡಿಯಾಗಿರುವ ಜಾಜಿಕಟ್ಟೆ ತನ್ನದೇ ಅದ ಹಿನ್ನೆಲೆ ಹೊಂದಿದೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸಲಾಗುವುದು. ಜಾಜಿಕಟ್ಟೆ ಉಳಿದರೆ ಮಾತ್ರ ನಗರದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಿ ಕೊಳವೆ ಬಾವಿಗಳಲ್ಲಿ ನೀರು ಬರುವುದು. ತುಮಕೂರಿನ ಅಮಾನಿಕೆರೆ ಮಾದರಿಯಲ್ಲಿ ಜಾಜಿಕಟ್ಟೆಯನ್ನು ಅಭಿವೃದ್ಧಿಗೊಳಿಸಬೇಕು. ಆರ್.ರಾಮು 26ನೇ ವಾರ್ಡ್‌ ನಗರಸಭೆ ಸದಸ್ಯ ಸುಂದರೀಕರಣಕ್ಕೆ ಅದ್ಯತೆ ಜಾಜಿಕಟ್ಟೆ ಅಭಿವೃದ್ಧಿಗೆ ಮಂಜೂರಾಗಿದ್ದ ₹2 ಕೋಟಿ ಅನುದಾನದಲ್ಲಿ ₹80 ಲಕ್ಷ ಉಳಿದಿದೆ. ಅದನ್ನು ಬೇರೆ ಕಾಮಗಾರಿಗೆ ಬಳಸದೆ ಜಾಜಿಕಟ್ಟೆ ಅಭಿವೃದ್ಧಿಗೆ ಬಳಕೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಜಾಜಿಕಟ್ಟೆ ಸುಂದರೀಕರಣಕ್ಕೆ ಆದ್ಯತೆ ನೀಡಬೇಕು. ಇಲ್ಲಿ ನೀರಿದ್ದರೆ ಶಿರಾದಲ್ಲಿ ಅರ್ಧದಷ್ಟು ಭಾಗದಲ್ಲಿ ನೀರಿಗೆ ತೊಂದರೆ ಇರುವುದಿಲ್ಲ. ಜಾಜಿಕಟ್ಟೆಗೆ ಸರಾಗವಾಗಿ ನೀರು ಹರಿದುಬರುವಂತೆ ಕಾಲುವೆಗಳನ್ನು ತೆರವುಗೊಳಿಸಬೇಕು. ಉಮಾ ವಿಜಯರಾಜು 28ನೇ ವಾರ್ಡ್ ಸದಸ್ಯ. ಜಲ ಮೂಲ ಉಳಿಸಿ ಮಳೆ ಬಂದ ಸಮಯದಲ್ಲಿ ಹಿಂದೆ ಜನರು ಜಾಜಿ ಕಟ್ಟೆ ನೋಡಲು ಬರುತ್ತಿದ್ದರು. ವಾರಗಟ್ಟಲೇ ನೀರು ಹರಿದುಬರುತ್ತಿತ್ತು. ಅದನ್ನು ನೋಡುವುದೇ ಹಬ್ಬವಾಗಿತ್ತು. ಈಗ ಜಾಜಿಕಟ್ಟೆಯ ಗತವೈಭವ ಕಳೆದುಕೊಂಡಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಜಾಜಿ ಕಟ್ಟೆ ಮಾಯವಾಗಿ ಹೆಸರು ಮಾತ್ರ ಉಳಿಯುವುದು. ಅಂತರ್ಜಲ ಮಟ್ಟ ಹೆಚ್ಚಿಸಲು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಅದರೆ ಇರುವ ಜಲ ಮೂಲಗಳನ್ನು ಉಳಿಸಿಕೊಳ್ಳದಿರುವುದು ದುರಂತ. ಸುನೀತಾ ಶಿರಾ. ತಾಲ್ಲೂಕು ಆಡಳಿತ ಆಸಕ್ತಿ ವಹಿಸಲಿ ಜಲಮೂಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಬೇಕು. ನಗರದ ಏಕೈಕ ಜಲಮೂಲವನ್ನು ಅಚ್ಚುಕಟ್ಟು ಮಾಡಿ ಉಳಿಸಿಕೊಳ್ಳಬೇಕು. ಕೂಡಲೇ ನಗರಸಭೆ ತಾಲ್ಲೂಕು ಆಡಳಿತ ಈ ಬಗ್ಗೆ ಆಸಕ್ತಿ ವಹಿಸದಿದ್ದರೆ ಜಾಜಮ್ಮನ ಕಟ್ಟೆ ಇತಿಹಾಸ ಪುಟಕ್ಕೆ ಸೇರುವುದರಲ್ಲಿ ಅನುಮಾನ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT