ಪಾವಗಡ: ತಾಲ್ಲೂಕಿನ ಚಿತ್ತಗಾನಹಳ್ಳಿಯಲ್ಲಿ ಭಾನುವಾರ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ರಾಜ್ಯೋತ್ಸವದ ಪ್ರಯುಕ್ತ ಗ್ರಾಮದ ಪ್ರಮುಖ ಬೀದಿಗಳನ್ನು ಕನ್ನಡದ ಬಾವುಟಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ಸಿವೈಸಿ ಯುವಕರ ತಂಡದಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಿಸಿದರು.
ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಚಟುವಟಿಕೆ ಆಕರ್ಷಣೀಯವಾಗಿತ್ತು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ ಮಾತನಾಡಿ, ಕೇವಲ ಮೂರು ಕಿ.ಮೀ ಅಂತರದಲ್ಲಿ ಆಂಧ್ರಪ್ರದೇಶ ಗಡಿಯಿದ್ದರೂ ಗ್ರಾಮದಲ್ಲಿ ಪ್ರತಿಯೊಬ್ಬರೂ ಹೆಚ್ಚಾಗಿ ಕನ್ನಡ ಭಾಷೆ ಮಾತನಾಡುತ್ತಾರೆ. ಗಡಿಯಾಚೆ ಆಂಧ್ರದ ಜನತೆ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವ ಮೂಲಕ ಸಹೋದರತ್ವ ಮೆರೆಯುತ್ತಿದ್ದಾರೆ ಎಂದರು.
ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಬದುಕು ನೀಡುವ ಭಾಷೆಯಾಗಿದ್ದು, ಇಂತಹ ಭಾಷೆ ಹೆಚ್ಚೆಚ್ಚು ಕಾಲ ಜೀವಂತವಾಗಿರುತ್ತದೆ. ಎಂತಹ ದಾಳಿಗಳಿಗೆ ಒಳಗಾದರೂ ಶತಮಾನಗಳಿಂದ ತನ್ನ ಮಹತ್ವವನ್ನು ಭಾಷೆ ಹೆಚ್ಚಿಸಿಕೊಳ್ಳುತ್ತಿದೆ ಎಂದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿವೈ ಮಂಜುನಾಥ್, ಸರ್ಕಾರಿ ಕನ್ನಡ ಶಾಲೆ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕರಿಸಿ, ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸುವ ಮೂಲಕ ಶಾಲೆಯನ್ನು ಉಳಿಸಬೇಕು ಎಂದರು.
ಚಿತ್ತಗಾನಹಳ್ಳಿ ಚಂದ್ರು, ಶಾಲೆಗೆ ಅವಶ್ಯವಿರುವ ಪ್ರೊಜೆಕ್ಟರ್ ಇತ್ಯಾದಿ ಸಲಕರಣೆ ಕೊಡಿಸಲು ಯುವಕರ ತಂಡ ಸಿದ್ಧವಿದೆ. ಗಡಿ ಗ್ರಾಮಗಳಿಗೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕು. ಶಾಲೆಗೆ ಅಗತ್ಯ ಸವಲತ್ತು ಕಲ್ಪಿಸಿ ಸರ್ಕಾರ ಕನ್ನಡ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.