ಶಿರಾ: ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಜಾನುವಾರುಗಳ ಸಂರಕ್ಷಣೆ ಮಾಡುವ ಸಲುವಾಗಿ ಮೇವು ಬ್ಯಾಂಕ್ ಪ್ರಾರಂಭಿಸಿದ್ದು ಅರ್ಹ ರೈತರು ಇದರ ಪ್ರಯೋಜನ ಪಡೆಯುವಂತೆ ತಹಶೀಲ್ದಾರ್ ದತ್ತಾತ್ರೇಯ ಜೆ.ಗಾಧಾ ಹೇಳಿದರು.
ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಶನಿವಾರ ಉಗ್ರೇಗೌಡ ಸ್ಮಾರಕ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕಳ್ಳಂಬೆಳ್ಳ ಹೋಬಳಿಯ ಜಾನುವಾರುಗಳಿಗೆ ಮೇವು ವಿತರಣಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಕುರುಬರಾಮನಹಳ್ಳಿಯಲ್ಲಿ ಈಗಾಗಲೇ ಮೇವು ಬ್ಯಾಂಕ್ ಪ್ರಾರಂಭಿಸಲಾಗಿದೆ. ತಾಲ್ಲೂಕಿನ ಎರಡನೇ ಮೇವು ಬ್ಯಾಂಕ್ ಪ್ರಾರಂಭಿಸುತ್ತಿದ್ದು ಜಾನುವಾರು ಹೊಂದಿರುವ ರೈತರಿಗೆ ಮೇವು ವಿತರಣೆ ಮಾಡಲಾಗುತ್ತಿದೆ. ರೈತರು ಪಶು ಇಲಾಖೆಯಿಂದ ಮೇವು ವಿತರಣಾ ಕಾರ್ಡ್ ಪಡೆದುಕೊಂಡು ಮತ್ತು ಮೇವು ತೆಗೆದುಕೊಂಡು ಹೋಗಲು ಬೇಕಾಗುವ ಸಾಮಾಗ್ರಿಗಳನ್ನು ತೆಗೆದುಕೊಂಡು ಬಂದು ಮೇವು ಪಡೆದು ಕೊಳ್ಳಬಹುದಾಗಿದೆ. ಪ್ರತಿ ಜಾನುವಾರಿಗೆ ದಿನವೊಂದಕ್ಕೆ 6 ಕೆ.ಜಿ ಯಂತೆ ಒಂದು ವಾರಕ್ಕೆ ಬೇಕಾಗುವ ಮೇವನ್ನು ವಿತರಿಸಲಾಗುವುದು ಎಂದರು.
ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ಎಸ್.ರಮೇಶ್, ಉಪ ತಹಶೀಲ್ದಾರ್ ನರಸಿಂಹಮೂರ್ತಿ, ವಿನೋದ್, ವಸಂತ್ ಕುಮಾರ್ ಇದ್ದರು.