ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳವರಿಂದ ಸಂವಿಧಾನ ಬುಡಮೇಲು: ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಆತಂಕ

Last Updated 29 ಜೂನ್ 2020, 9:05 IST
ಅಕ್ಷರ ಗಾತ್ರ

ತುಮಕೂರು: ಭೂಸುಧಾರಣೆ ತಿದ್ದುಪಡಿ ಕಾಯ್ದೆಯಿಂದ ಉಳುವವರ ಭಾರತಕ್ಕೆ ಬದಲಾಗಿ ಉಳ್ಳವರ ಭಾರತವನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಆತಂಕ ವ್ಯಕ್ತಪಡಿಸಿದರು.

ನಗರದ ಜನಚಳವಳಿ ಕೇಂದ್ರದಲ್ಲಿ ಭಾನುವಾರ ರಾಮಮನೋಹರ ಲೋಹಿಯಾ ಮತ್ತು ಸಮತಾ ವಿದ್ಯಾಲಯ ಟ್ರಸ್ಟ್‌ನಿಂದ 2 ಸಾವಿರ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿ ಅವರು ಮಾತನಾಡಿದರು.

ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಕ್ರಾಂತಿಕಾರಕ ಭೂಸುಧಾರಣೆ ಕಾಯ್ದೆ ಜಾರಿಗೊಳಿಸಿದರು. ಪರಿಣಾಮ ಮಠ-ದೇವಾಲಯಗಳು, ದೊಡ್ಡದೊಡ್ಡ ಭೂಮಾಲೀಕರು, ಜಾಗೀರುದಾರರ ಬಳಿಯಿದ್ದ ಲಕ್ಷಾಂತರ ಎಕರೆ ಭೂಮಿ ಗೇಣಿದಾರರು ಮತ್ತು ಉಳುವವರಿಗೆ ಸೇರುವಂತಾಯಿತು.

ಇನ್ನೊಂದೆಡೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಬ್ಯಾಂಕುಗಳು, ವಿಮಾ ಕ್ಷೇತ್ರ, ವಿದ್ಯುಚ್ಛಕ್ತಿ ಕ್ಷೇತ್ರಗಳನ್ನು ರಾಷ್ಟ್ರೀಕರಣಗೊಳಿಸಿದರು. ರಾಜಧನ ರದ್ದುಪಡಿಸಿದರು. ಸಂವಿಧಾನದ ಆಶಯಗಳಡಿ ಕೆಲಸ ಮಾಡಿದರು. ದೇವರಾಜ ಅರಸು ಮತ್ತು ಇಂದಿರಾಗಾಂಧಿ ಕೈಗೊಂಡ ಕಾರ್ಯಗಳಿಂದ ಉಳ್ಳವರ ಭಾರತವಾಗಿದುದ್ದು ಉಳುವವರು, ದುಡಿಯುವವರ ಭಾರತವಾಯಿತು ಎಂದರು.

ಯಾವುದೇ ಸರ್ಕಾರಕ್ಕೆ ಉತ್ತರದಾಯಿತ್ವ ಇರಬೇಕು. ಸರ್ಕಾರ ತಾನು ತೆಗೆದುಕೊಳ್ಳುವ ತೀರ್ಮಾನಕ್ಕೆ ಹೊಣೆಗಾರನಾಗಬೇಕು. ಆದರೆ ಇಂದು ಸಂವಿಧಾನ ನೋಡುತ್ತಿಲ್ಲ, ಪಾಲಿಸುತ್ತಿಲ್ಲ ಎಂದು ಹೇಳಿದರು.

ನೋಟು ಅಮಾನ್ಯೀಕರಣದ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಿಲ್ಲ. ಹಣಕಾಸು ಸಚಿವರಿಗೆ ಆರ್‌ಬಿಐ ನಿರ್ದೇಶಕರಿಗೂ ತಿಳಿದಿರಲಿಲ್ಲ. ಇಂತಹ ಕ್ರಮದಿಂದ ಆರ್ಥಿಕತೆ ಮತ್ತು ರೈತರು, ಕಾರ್ಮಿಕರು ಜನಸಾಮಾನ್ಯರು ಹೊಡೆತ ತಿಂದರು. ಜಿಎಸ್‌ಟಿಯಿಂದಲೂ ಸಾವಿರರಾರು ಉದ್ದಿಮೆಗಳು ಮುಚ್ಚಿದವು ಎಂದು ತಿಳಿಸಿದರು.

ಸಾಮಾಜಿಕ ಹೋರಾಟಗಾರ ಕೆ.ದೊರೈರಾಜ್, ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಉಮೇಶ್ ಮಾತನಾಡಿದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ ಇದ್ದರು.

ಕೊರೊನಾ ಸಂದರ್ಭ ದುರುಪಯೋಗ

ಇಂದು ಉಳುವವರು ಮತ್ತು ದುಡಿಯುವವರಿಂದ ಭೂಮಿ ಕಿತ್ತುಕೊಂಡು ಉಳ್ಳವರ ಭಾರತವನ್ನಾಗಿ ಮಾಡಲಾಗುತ್ತಿದೆ. ಕೊರೊನಾ ಸಂದರ್ಭ ದುರುಪಯೋಗ ಮಾಡಿಕೊಂಡು ಸಂವಿಧಾನ ನಾಶ ಮಾಡುವ ಕೆಲಸ ವ್ಯಾಪಕವಾಗಿ ನಡೆಯುತ್ತಿದೆ. ರೈತರ ಭೂಮಿಯನ್ನು ಬಂಡವಾಳಗಾರರಿಗೆ ಕೊಡಲಾಗುತ್ತಿದೆ. ಕಾರ್ಪೊರೇಟ್ ಕಂಪನಿಗಳ ಕಪ್ಪುಹಣವನ್ನು ಭೂಮಿ ಖರೀದಿಗೆ ಸುರಿದು ಬಿಳಿಹಣ ಮಾಡುವುದೇ ಸರ್ಕಾರದ ಉದ್ದೇಶವಾಗಿದೆ ಎಂದು ಪ್ರೊ.ರವಿವರ್ಮ ಕುಮಾರ್ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT